ಹನೂರು: ವಸತಿರಹಿತರ ಬಗ್ಗೆ ಸರ್ವೇ ನಡೆಸಿ ಪ್ರತಿಯೊಬ್ಬರಿಗೂ ನಿವೇಶನ ನೀಡುವುದರ ಜೊತೆಗೆ ಮನೆ ಮಂಜೂರು ಮಾಡಿಕೊಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಭರವಸೆ ನೀಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದ ಅಧಿಕಾರ ವಹಿಸಿಕೊಂಡ ಬಳಿಕ ಬುಧವಾರ ಅವರು ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳುವ ವೇಳೆ ಹನೂರು ಪಟ್ಟಣಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದರು.
ಹನೂರು ಕ್ಷೇತ್ರ ಮಲೆ ಮಹದೇಶ್ವರರು ನೆಲೆಸಿರುವಂತ ಪುಣ್ಯ ಸ್ಥಳ. ನನ್ನ ಆರಾಧ್ಯ ದೈವವೂ ಕೂಡ. ಈ ದಿಸೆಯಲ್ಲಿ ಪೂಜೆ ಸಲ್ಲಿಸುವ ದಿಸೆಯಲ್ಲಿ ಸನ್ನಿಧಿಗೆ ತೆರಳುತ್ತಿದ್ದೇನೆ.
ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು. ಹನೂರು ಭಾಗವು ಕಾಡಂಚಿನಿಂದ ಕೂಡಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಕಡು ಬಡವರಿದ್ದಾರೆ. ಈ ದಿಸೆಯಲ್ಲಿ ವಸತಿ ಹೀನರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ 20×30 ನಿವೇಶನ ನೀಡುವುದರ ಜೊತೆಗೆ ಮನೆ ನಿರ್ಮಿಸಿಕೊಡಲು ಹುಲುಸುಗುಡ್ಡೆಯ ಬಳಿ ಹೌಸಿಂಗ್ ಬೋರ್ಡ್ ಲೇಔಟ್ ಕಾಲನಿ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಡಾ.ಎಸ್.ದತ್ತೇಶ್ಕುಮಾರ್, ಹನೂರು ಮಂಡಲಾಧ್ಯಕ್ಷ ಸಿದ್ದಪ್ಪ, ಪಪಂ ನಾಮ ನಿದೇರ್ಶಿತ ಸದಸ್ಯರಾದ ವೆಂಕಟೇಗೌಡ, ಪುಟ್ಟರಾಜು ಹಾಗೂ ಇನ್ನಿತರರು ಹಾಜರಿದ್ದರು.