ಮಂಡ್ಯ : ಕೋವಿಡ್ ಪಾಸಿಟಿವ್ ಬಂದರೂ ಮಂಡ್ಯದಲ್ಲಿ ಕೆಲವರು ಆರೋಗ್ಯ ಇಲಾಖೆಯ ಕಣ್ತಪ್ಪಿಸಿ ಶಬರಿಮಲೆ ಯಾತ್ರೆಗೆ ಹೊರಟಿದ್ದ ಪ್ರಸಂಗ ಸೋಮವಾರ ಸಂಭವಿಸಿದೆ. ಸೋಂಕಿತ ಯಾತ್ರಿಗಳನ್ನ ತಡೆದ ಪೊಲೀಸರು ವಾಪಸ್ ಕರೆತಂದಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಮಂಚೀಬೀಡು ಗ್ರಾಮದಿಂದ ಶಬರಿಮಲೆ ಯಾತ್ರೆಗೆ ಅಯ್ಯಪ್ಪಸ್ವಾಮಿ ಭಕ್ತರು ಹೊರಟಿದ್ದರು. ಈ ವೇಳೆ ಕರೊನಾ ಪರೀಕ್ಷೆ ಮಾಡಿಸಿದ್ದು, ವರದಿ ಇನ್ನೂ ಬಂದಿರಲಿಲ್ಲ. ವರದಿ ಬರುವವರೆಗೂ ಎಲ್ಲಿಯೂ ತೆರಳದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿತ್ತು. ಆದರೆ, ಕರೊನಾ ಟೆಸ್ಟ್ ಮಾಡಿಸಿದ ಮರು ದಿನ ಬೆಳಂಬೆಳಗ್ಗೆಯೇ 30 ಜನ ಯಾತ್ರೆಗೆ ಹೊರಟಿದ್ದರು. ಇತ್ತ ವರದಿಯಲ್ಲಿ 15 ಮಂದಿಗೆ ಕರೊನಾ ಸೋಂಕು ದೃಢಪಟ್ಟಿತ್ತು.
ಶಬರಿಮಲೆಗೆ ಹೊರಟ 30 ಮಂದಿ ಪೈಕಿ 15 ಜನರಿಗೆ ಕರೊನಾ ಪಾಸಿಟಿವ್ ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಆರೋಗ್ಯ ಇಲಾಖೆ, ಕೆ.ಆರ್.ಪೇಟೆ ಪಟ್ಟಣ ಹಾಗೂ ಗ್ರಾಮಾಂತರ ಪೊಲೀಸರ ಸಹಾಯ ಪಡೆದು ಸೋಂಕಿತ ಯಾತ್ರಾರ್ಥಿಗಳ ಪತ್ತೆಗೆ ಬಲೆ ಬೀಸಿತ್ತು. ಗುಂಡ್ಲುಪೇಟೆ ಬೇಗೂರು ಚೆಕ್ ಪೋಸ್ಟ್ ಬಳಿ ಯಾತ್ರಿಗಳನ್ನು ತಡೆದ ಪೊಲೀಸರು ವಾಪಸ್ ಕರೆತಂದರು. ನಿಯಮ ಉಲ್ಲಂಘಿಸಿ ಯಾತ್ರೆ ಕೈಗೊಂಡವರ ವಿರುದ್ಧ ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.