ಮಂಡ್ಯ : ಬೆಳಗಾವಿಯ ಸುವರ್ಣಸೌಧದ ಮುಂದೆ ಸಂಗೊಳ್ಳಿ ರಾಯಣ್ಣ ರವರ ಬೃಹತ್ ಪ್ರತಿಮೆಯನ್ನು ನಿರ್ಮಿಸುವುದು ಸೇರಿದಂತೆ ಪ್ರಮುಖ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ನಗರದಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ಸರ್ಎಂವಿ ಪ್ರತಿಮೆಯಿಂದ ಡಿಸಿ ಕಚೆೇರಿ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ಕಳೆದ 17 ರಂದು ಬೆಳಗಾವಿಯಲ್ಲಿ ರಾಯಣ್ಣ ಅವರ ಪ್ರತಿಮೆಯನ್ನು ಭಗ್ನಗೊಳಿಸಿರುವ ಹಾಗೂ ಕನ್ನಡ ಬಾವುಟಕ್ಕೆ ಬೆಂಕಿ ಹಚ್ಚಿರುವ ಕೃತ್ಯವು ದೇಶದ್ರೋಹಿ ಕೆಲಸವಾಗಿದ್ದು, ದೇಶಭಕ್ತ ರಾಯಣ್ಣರವರ ಪ್ರತಿಮೆಯನ್ನು ಭಗ್ನಗೊಳಿಸಿರುವುದು ಹೀನ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಪ್ರತಿಜಿಲ್ಲೆಯಲ್ಲೂ ಜಿಲ್ಲಾಡಳಿತದ ಆವರಣದಲ್ಲಿ ಸಂಗೊಳ್ಳಿರಾಯಣ್ಣರವರ ಪ್ರತಿಮೆಯನ್ನು ನಿರ್ಮಿಸಬೇಕು, ಕರ್ನಾಟಕ ರಾಜ್ಯದಲ್ಲಿ ಎಲ್ಲ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ ಸಂಗೊಳ್ಳಿ ರಾಯಣ್ಣರವರ ಭಾವಚಿತ್ರವನ್ನು ಇಡಬೇಕು. ಆಗಸ್ಟ್ 15, ಜನವರಿ 26ರಂದು ಸರ್ಕಾರಿ ಗೌರವ ಪೂಜೆ ಸಲ್ಲಿಸಬೇಕು, ಸರ್ಕಾರದ ಅಧೀನದಲ್ಲಿ ಸಂಗೊಳ್ಳಿ ರಾಯಣ್ಣ ನಿಗಮ-ಮಂಡಳಿಯನ್ನು ರಚಿಸಬೇಕು.
ಈ ನಿಗಮ-ಮಂಡಳಿಯ ಪ್ರಯೋಜನವನ್ನು ನಮ್ಮ ನಾಡಿನ ಯೋಧರಿಗೆ ಹಾಗೂ ಪೊಲೀಸ್ ಸಿಬ್ಬಂದಿಗೆ ಯಾವುದಾದರೂ ಅನಾಹುತ ಸಂಭವಿಸಿದ ಸಂದರ್ಭದಲ್ಲಿ ಈ ನಿಗಮ-ಮಂಡಳಿಯಿಂದ ಅವರ ಕುಟುಂಬಕ್ಕೆ ಸಹಾಯ ಹಸ್ತ ನೀಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ಪರಿಗಣಿಸಿ ಅನುಷ್ಠಾನಗೊಳಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೆಚ್ಚಿನ ಮಹತ್ವದ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಕೃತ್ಯದಲ್ಲಿ ಭಾಗಿಯಾಗಿರುವ ಎಂ.ಇ.ಎಸ್ ಪುಂಡರಿಗೆ ಕಠಿಣ ಶಿಕ್ಷೆಯನ್ನು ನೀಡಬೇಕು, ಎಂ.ಇ.ಎಸ್ ಸಂಘಟನೆಗಳನ್ನು ಕರ್ನಾಟಕದಲ್ಲಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಂಡ್ಯ ಜಿಲ್ಲಾ ಕುರುಬರ ಸಂಘದ ಜಿಲ್ಲಾ ನಿರ್ದೇಶಕರಾದ ಸಾತನೂರು ಎನ್.ಮಹೇಶ್ ನೇತೃತ್ವದಲ್ಲಿ ನಡೆದ ಪ್ರತಿ ಭಟನೆಯಲ್ಲಿ ನಗರಸಭಾ ಮಾಜಿ ಸದಸ್ಯ ಡಿ. ಮಂಜುನಾಥ್, ಸಮಾಜ ಸೇವಕ ನಾಗಮಂಗಲ ಸುರೇಶ್, ಹೊನ್ನೇಗೌಡ ನಿರ್ದೇಶಕರಾದ ಪ್ರಸನ್ನ, ಕೃಷ್ಣ, ಶಿವಣ್ಣ, ಮಂಜುನಾಥ್, ನಿಂಗರಾಜು, ಮಹೇಶ್, ಮುಖಂಡರಾದ ಕರೀಗೌಡ, ಸತೀಶ್, ಪ್ರಸನ್ನ, ಮಹೇಶ್, ನಹಿಂ, ವಿಜಿಕುಮಾರ್, ಚಂದ್ರು, ಸ್ವಾಮಿ, ನಾರಾಯಣ್, ರಾಯಣ್ಣನ ಅಭಿಮಾನಿಗಳು ಭಾಗವಹಿಸಿದ್ದರು.