ನಂಜನಗೂಡು: ಅಪ್ರಾಪ್ತೆಯನ್ನು ಮದುವೆಯಾಗಿದ್ದೇಕೆ ಎಂದು ಬುದ್ದಿವಾದ ಹೇಳಿದ ಗ್ರಾಪಂ ಮಾಜಿ ಅಧ್ಯಕ್ಷನಿಗೆ ಚಾಕುವಿನಿಂದ ಇರಿದ ಘಟನೆ ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಲ್ಲಹಳ್ಳಿ ಗ್ರಾಮದ ನಿವಾಸಿ ಹೆಮ್ಮರಗಾಲ ಗ್ರಾಮ ಪಂಚಾಯ್ತಿಯಲ್ಲಿ ಮಾಜಿ ಅಧ್ಯಕ್ಷರಾಗಿದ್ದ ನಾಗೇಶ್ ಎಂಬುವರೇ ಚಾಕು ಇರಿತಕ್ಕೊಳಗಾದ ವ್ಯಕ್ತಿ. ಇವರ ಚಿಕ್ಕಪ್ಪನ ಮಗಳನ್ನು ಮಾದೇಶ್ ಅಲಿಯಾಸ್ ಮೆಣಸು ಎಂಬಾತ ಗೌಪ್ಯವಾಗಿ ಕಳೆದ ಒಂದೂವರೆ ತಿಂಗಳ ಹಿಂದೆ ಮದುವೆಯಾಗಿದ್ದನು. ಆಕೆಗಿನ್ನೂ ಹದಿನೆಂಟು ಆಗಿರಲಿಲ್ಲ ಎಂದು ಹೇಳಲಾಗಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಾದೇಶ್ ಸಿಕ್ಕಿದಾಗ ನಾಗೇಶ್ ವಿಚಾರಿಸಿದ್ದು, ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದು ತಪ್ಪು. ಹದಿನೆಂಟು ವರ್ಷವಾಗುವ ತನಕ ಕಾಯಬೇಕಿತ್ತು. ಕಾನೂನು ಪ್ರಕಾರ ಅಪರಾಧ ಎಂದು ಬುದ್ದಿವಾದ ಹೇಳಿದ್ದಾರೆ.
ಈ ವೇಳೆ ಕೋಪಗೊಂಡ ಮಾದೇಶ್ ಬುದ್ದಿ ಹೇಳಿದ ನಾಗೇಶ್ ವಿರುದ್ಧವೇ ಜಗಳಕ್ಕೆ ನಿಂತಿದ್ದಲ್ಲದೆ ಆತನಿಗೆ ಚಾಕುವಿನಿಂದ ಚುಚ್ಚಿದ್ದಾನೆ. ಈ ವೇಳೆ ರಕ್ತಸ್ರಾವವಾಗಿದ್ದು, ನಾಗೇಶ್ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಈ ಸಂದರ್ಭ ಸ್ಥಳೀಯರು ಅವರನ್ನು ನಂಜನಗೂಡಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.
ಇತ್ತ ಮಾದೇಶ್ ತಲೆ ಮರೆಸಿಕೊಂಡಿದ್ದು, ಆತನ ವಿರುದ್ಧ ದೊಡ್ಡಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.