ಮಡಿಕೇರಿ: ಕೊಡಗಿನಲ್ಲಿ ಸಮೃದ್ಧವಾಗಿ ಮಳೆ ಬರಲು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶಿರೂರು ಮಠದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀ ಪಾದಂಗಳವರು ಜಿಲ್ಲೆಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ಬೆಳಿಗ್ಗೆ ತಲಕಾವೇರಿಯಲ್ಲಿ ವಿಶೇಷ ಪೂಜೆ ನೆರವೇರಿಸಿದ ನಂತರ ಭಾಗಮಂಡಲದಲ್ಲೂ ಕೂಡ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಾಜ್ಯ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಅವರನ್ನು ಭೇಟಿಯಾಗಿ ಅವರ ಸಮಕ್ಷಮದಲ್ಲಿ ಬೆಂಗಳೂರಿನಲ್ಲಿ ಪೂಜೆ ನೆರವೇರಿಸಿದ ನಂತರ ರಾಜರಾಜೇಶ್ವರ ದೇಗುಲದಿಂದ ಶ್ರೀರಂಗಪಟ್ಟಣಕ್ಕೆ ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಮಿಂದು ಶ್ರೀರಂಗನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ಭಾಗಮಂಡಲ ತಲಕಾವರಿಗೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.
ಯತಿಗಳು ಮಠದಲ್ಲಿ ಪೂಜೆ ನೆರವೇರಿಸುವ ಪಟ್ಟದ ದೇವರ ಮೂರ್ತಿಗಳ ಸಹಿತ ಆಗಮಿಸಿ ವಿಶೇಷ ಪೂಜೆಯನ್ನು ಮಳೆಗಾಗಿ ನೆರವೇರಿಸಿದ್ದಾರೆ. ಪೂಜೆ ನೆರವೇರಿಸಿದ ನಂತರ ಕೊಡಗಿನಲ್ಲಿ ಮಳೆ ಬೀಳಲಿದೆ ಎಂದು ಸ್ವಾಮೀಜಿಗಳು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಜೀವ ಜಲಕ್ಕೆ ವರುಣನ ಕೃಪೆಯಾಗಬೇಕು, ಕುಡಿಯುವ ನೀರಿಗೆ, ಕೃಷಿಗೆ ಮಳೆಯ ಮೂಲಕ ವರುಣನ ಆಗಮನವಾಗಬೇಕು ಕೊಡಗಿನಲ್ಲಿ ಬೆಳೆಗಳು ಸಮೃದ್ಧವಾಗಬೇಕು ಎಲ್ಲರೂ ಸುಖಿಗಳಾಗಿ ಬದುಕಬೇಕು ಎಂಬ ಸಂಕಲ್ಪದೊಂದಿಗೆ ಈ ಪೂಜೆಯನ್ನು ನೆರವೇರಿಸಲಾಗುತ್ತಿದೆ ಎಂದು ಹೇಳಿದರು. ಇಂದಿನ ಪೂಜೆಯಲ್ಲಿ ಭಾಗಮಂಡಲ ಸುತ್ತಮುತ್ತಲಿನ ಭಕ್ತಾದಿಗಳು, ಪಾರುಪತ್ತೆಗಾರರಾದ ಪೊನ್ನಣ್ಣ, ಕ್ಷೇತ್ರ ಪುರೋಹಿತರಾದ ಹರೀಶ್ ಭಟ್ರು, ಮತ್ತಿತರು ಪಾಲ್ಗೊಂಡಿದ್ದರು.