ಮಡಿಕೇರಿ: ಕಾವೇರಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕುಶಾಲನಗರ ಬಳಿಯ ಗುಡ್ಡೆಹೊಸೂರಿನ ಬಾಳುಗೋಡಿನಲ್ಲಿ ನಡೆದಿದೆ.
7ನೇ ಹೊಸಕೋಟೆ ಗ್ರಾಮದ ನಿವಾಸಿ ಸುರೇಶ್ ಎಂಬವರ ಪುತ್ರ ಪ್ರದೀಪ್ (20) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಯುವಕ. ಈತ ಸ್ನೇಹಿತರೊಂದಿಗೆ ನದಿಗೆ ಸ್ನಾನ ಮಾಡಲು ತೆರಳಿದ ಸಂದರ್ಭ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಬೇಸಿಗೆಯ ಸಮಯದಲ್ಲಿ ಸಮೀಪದ ನದಿಗಳಿಗೆ ತೆರಳಿ ಸ್ನಾನ ಮಾಡುವುದು ಕೆಲವು ಯುವಕರಿಗೆ ಹವ್ಯಾಸವಾಗಿದ್ದು ಅದರಂತೆ ಸೆಖೆಯನ್ನು ತಣಿಸಲು ತೆರಳಿದ ವೇಳೆ ಈ ಘಟನೆ ನಡೆದಿರ ಬಹುದೆಂದು ಹೇಳಲಾಗಿದೆ.
ಮೃತದೇಹ ಮೀನಿನ ಗಾಳ ಹಾಗೂ ಬಲೆಗಳಿಗೆ ಸಿಲುಕಿದ ಸ್ಥಿತಿಯಲ್ಲಿದೆ ಎನ್ನಲಾಗಿದೆ ಇದು ಅನುಮಾನ ಹುಟ್ಟಿಸಿದೆ. ನೀರಿನಲ್ಲಿ ಈಜುತ್ತಿದ್ದ ವೇಳೆ ಗಾಳ ಅಥವಾ ಬಲೆಗೆ ಸಿಲುಕಿ ಈಜಲಾಗದೆ ಮುಳಗಿ ಸಾವನ್ನಪ್ಪಿದ್ರಾ ಎಂಬ ಶಂಕೆ ವ್ಯಕ್ತವಾಗಿದೆ. ತನಿಖೆ ಬಳಿಕ ನೈಜ ವಿಚಾರ ಬಯಲಿಗೆ ಬರಬೇಕಾಗಿದೆ.