ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪೌರ ಕಾರ್ಮಿಕರು ಕಳೆದ 5 ದಿನಗಳಿಂದ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮಡಿಕೇರಿ ನಗರ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕ ಬೆಂಬಲ ಸೂಚಿಸಿದೆ.
ಮಡಿಕೇರಿ ನಗರಸಭೆ ಎದುರು ಪ್ರತಿಭಟನೆ ನಡೆಸುತ್ತಿರುವ ಪೌರ ಕಾರ್ಮಿಕರನ್ನು ಭೇಟಿಯಾದ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅಲ್ಲದೆ ಸಮಸ್ಯೆಗಳನ್ನು ಆಲಿಸಿ ಸರಕಾರ ತಕ್ಷಣ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರ ಕಾರ್ಮಿಕರನ್ನು ಎಲ್ಲಾ ನೌಕರರಂತೆ ಪರಿಗಣಿಸದೆ ಕಡೆಗಣಿಸಲಾಗುತ್ತಿದೆ. ದುಡಿಮೆಗೆ ತಕ್ಕ ವೇತನ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಮಳೆ, ಗಾಳಿ, ಚಳಿ, ಬಿಸಿಲೆನ್ನದೆ ನಗರದ ಸ್ವಚ್ಛತೆಗಾಗಿ ಮತ್ತು ಜನರ ಹಿತಕ್ಕಾಗಿ ನಿತ್ಯ ದುಡಿಯುವ ಪೌರ ಕಾರ್ಮಿಕರ ಜೀವನಕ್ಕೆ ಭದ್ರತೆ ಇಲ್ಲದಾಗಿದೆ. ಮೂಲಭೂತ ಸೌಲಭ್ಯ, ಆರೋಗ್ಯ ರಕ್ಷಣೆ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸದೆ ಅತಂತ್ರಗೊಳಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಸ ಸಾಗಿಸುವ ವಾಹನ ಚಾಲಕರು, ನಿರ್ವಾಹಕರು, ಕಸ ತುಂಬಿಸುವವರು, ಕಸ ವಿಂಗಡಿಸುವವರು ಹಾಗೂ ಒಳಚರಂಡಿ ಕಾರ್ಮಿಕರನ್ನು ಪೌರ ಕಾರ್ಮಿಕರೆಂದು ಘೋಷಿಸಿ ಪೌರಕಾರ್ಮಿಕರಿಗೆ ನೀಡುವ ಸ್ಥಾನಮಾನ, ಭತ್ಯೆ ಮತ್ತು ವೇತನ ನೀಡಬೇಕು. ವೇತನ ನೇರ ಪಾವತಿಗೆ ಕ್ರಮ ಕೈಗೊಂಡು ಖಾಯಂಗೊಳಿಸಬೇಕೆನ್ನುವ ಒತ್ತಾಯ ನ್ಯಾಯಸಮ್ಮತವಾಗಿದೆ. ಕುಡಿಯುವ ನೀರು ಸರಬರಾಜು ಸಿಬ್ಬಂದಿ ಹಾಗೂ ಕಚೇರಿ ಕಾರ್ಯನಿರ್ವಹಿಸುವ ಡಾಟ ಆಪರೇಟರುಗಳ ಗುತ್ತಿಗೆ ಆಧಾರದ ಸೇವೆಯನ್ನು ರದ್ದುಪಡಿಸಿ ನೇರವೇತನ ಜಾರಿಗೊಳಿಸಿ ಖಾಯಂಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆನ್ನುವ ಬೇಡಿಕೆ ನ್ಯಾಯಯುತವಾಗಿದೆ. ಆದ್ದರಿಂದ ಸರಕಾರ ತಕ್ಷಣ ಬೇಡಿಕೆ ಈಡೇರಿಸಲು ಮುಂದಾಗಬೇಕೆಂದು ಪೀಟರ್ ಒತ್ತಾಯಿಸಿದರು.
ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಪೌರಕಾರ್ಮಿಕರ ದುಡಿಮೆ ಶ್ರೇಷ್ಠವಾಗಿದೆ. ಇವರಿಗೆ ಚಂದ್ರನನ್ನು ತೋರಿಸಿ ಊಟ ನೀಡುವಂತೆ ಅಲ್ಪವೇತನ ನೀಡಿ ದುಡಿಸಿಕೊಳ್ಳುವುದು ಅಪರಾಧವಾಗಿದೆ. ಸ್ವಚ್ಛತೆಯ ಮೂಲಕ ಇಡೀ ಸಮಾಜದ ಆರೋಗ್ಯ ಕಾಪಾಡುವ ಪೌರಕಾರ್ಮಿಕರಿಗೆ ಹೆಚ್ಚಿನ ವೇತನವನ್ನು ಸರಕಾರ ಘೋಷಿಸಬೇಕೆಂದು ಆಗ್ರಹಿಸಿದರು.