ಕುಶಾಲನಗರ: ಉತ್ತರ ಭಾರತದ ಗಂಗಾ ಆರತಿ ರೀತಿಯಲ್ಲಿ ಜೀವನದಿ ಕಾವೇರಿಗೆ ನಿತ್ಯ ಆರತಿ ಬೆಳಗುವಂತಾಗಲಿ ಎಂದು ಚಲನಚಿತ್ರ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಆರ್ ಪ್ರೀತಮ್ ಶೆಟ್ಟಿ ಆಶಯ ವ್ಯಕ್ತಪಡಿಸಿದ್ದಾರೆ.
ಕುಶಾಲನಗರದಲ್ಲಿ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ 132ನೇ ಕಾವೇರಿ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಉತ್ತರದ ಗಂಗೆಯಲ್ಲಿ ದಿನನಿತ್ಯ ಆರತಿ ಕಾರ್ಯಕ್ರಮದಲ್ಲಿ ಲಕ್ಷೋಪಲಕ್ಷ ಭಕ್ತಾದಿಗಳು ಪಾಲ್ಗೊಳ್ಳುತ್ತಿದ್ದಾರೆ. ಕೊಡಗು ಜಿಲ್ಲೆಯ ತಲಕಾವೇರಿಯಿಂದ ಹುಟ್ಟಿ ಎರಡು ರಾಜ್ಯಗಳ ಮೂಲಕ ಜೀವ ನದಿಯಾಗಿ ಹರಿಯುವ ಕಾವೇರಿ ಸಂರಕ್ಷಣೆಯ ಜೊತೆಗೆ ಪಾವಿತ್ರ್ಯತೆಯನ್ನು ತಿಳಿಸುವ ಕೆಲಸ ಆಗಬೇಕಿದೆ ಎಂದ ಅವರು ಆ ಮೂಲಕ ನದಿಯ ಅಸ್ತಿತ್ವವನ್ನು ಉಳಿಸಲು ಸಾಧ್ಯ ಎಂದರು.
ರಾಷ್ಟ್ರಪ್ರಶಸ್ತಿ ವಿಜೇತ ಖ್ಯಾತ ಚಲನಚಿತ್ರ ನಿರ್ಮಾಪಕ ಅವಿನಾಶ್ ಶೆಟ್ಟಿ ಮಾತನಾಡಿ ಕಳೆದ 12 ವರ್ಷಗಳಿಂದ ನಿರಂತರವಾಗಿ ಕಾವೇರಿಗೆ ಆರತಿ ಬೆಳಗುವ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ ಹುಣ್ಣಿಮೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಅವರು ಅಷ್ಟೋತ್ತರ ಕುಂಕುಮಾರ್ಚನೆ ನಂತರ ನದಿಗೆ ಮಹಾ ಆರತಿ ಬೆಳಗಿದರು.
ಈ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಪ್ರಮುಖರಾದ ಚಂದ್ರಮೋಹನ್, ಜೋಯಪ್ಪ, ವೈಶಾಕ್, ಪ್ರವೀಣ್, ಮಹಾ ಆರತಿ ಬಳಗದ ವನಿತಾ ಚಂದ್ರಮೋಹನ್, ಸೋಮಶೇಖರ್, ಶಿವಾನಂದ್ ಬಳಗದ ಸದಸ್ಯರು ಇದ್ದರು.