ಮೈಸೂರು: ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ನಡೆಸುತ್ತಿದ್ದ ಮುಷ್ಕರದಿಂದಾಗಿ ನಗರದಲ್ಲಿ ವಿಲೇವಾರಿಯಾಗದೆ ಸಾವಿರ ಟನ್ ಕಸ ರಾಶಿ ಬಿದ್ದಿದೆ.
ಇದೀಗ ನೇರ ಪಾವತಿ, ಹೆಚ್ಚುವರಿ ಪೌರಕಾರ್ಮಿಕರು, ಮನೆ ಮನೆ ಕಸ ಸಂಗ್ರಹ ಹಾಗೂ ಕಸ ಸಾಗಾಣಿಕೆ ಮಾಡುವ ವಾಹನ ಚಾಲಕರ ಕಾಯಂಗೆ ಆಗ್ರಹಿಸಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಿ ನಡೆಸುತ್ತಿದ್ದ ಮುಷ್ಕರ ಸೋಮವಾರ ಸಂಜೆ ಅಂತ್ಯವಾಗಿದೆ. ಹೀಗಾಗಿ ಮಂಗಳವಾರದಿಂದ ಎಂದಿನಂತೆ ಸ್ವಚ್ಛತಾ ಕಾರ್ಯಕ್ಕೆ ಹಾಜರಾಗಲಿದ್ದಾರೆ.
ಆದರೆ ೪ ದಿನಗಳಿಂದ ಸಂಗ್ರಹವಾಗಿರುವ ಕಸವೂ ವಿಲೇವಾರಿಯಾಗದೇ ನಗರದಲ್ಲಿ ಅಶುಚಿತ್ವ ತಾಂಡವಾಡುತ್ತಿದೆ. ಮಳೆಯ ನಡುವೆಯೂ ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿನಿತ್ಯ ನಗರದಲ್ಲಿ 280 ಟನ್ ಕಸ ಸಂಗ್ರಹವಾಗುತ್ತದೆ. ನಾಲ್ಕು ದಿನಗಳಿಂದ ಸಾವಿರ ಟನ್ಗಿಂತ ಹೆಚ್ಚು ಕಸ ವಿಲೇವಾರಿಯಾಗದೇ ಉಳಿದಿದೆ.
ಕೆ.ಆರ್. ವೃತ್ತ, ದೇವರಾಜ ಮಾರುಕಟ್ಟೆ, ವಾಣಿ ವಿಲಾಸ ಮಾರುಕಟ್ಟೆ, ಬೋಟಿ ಬಜಾರ್ನಲ್ಲಿ ರಾಶಿ ರಾಶಿ ಕಸ ಉಳಿದಿದ್ದು, ರೋಗ ಹರಡುವ ತಾಣವಾಗಿ ಮಾರ್ಪಟ್ಟಿದೆ. ಪಾಲಿಕೆಯಲ್ಲಿ 2600 ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದು, ಮುಷ್ಕರಿಂದಾಗಿ 566 ಕಾರ್ಮಿಕರು ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಮಾತ್ರ ಕಸ ವಿಲೇವರಿ ಮಾಡಲಾಗುತ್ತಿದ್ದು, ಮನೆ ಮನೆಯಿಂದ ಕಸ ಸಂಗ್ರಹಿಸುತ್ತಿಲ್ಲ. 65 ವಾರ್ಡ್ಗಳಲ್ಲೂ ಸಮಸ್ಯೆ ಉಲ್ಬಣಗೊಂಡಿದೆ.
ಮಂಗಳವಾರದಿಂದ ಪೌರಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂಬ ಸುದ್ದಿ ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.