ಮಡಿಕೇರಿ: ತನ್ನ ಮಾತನ್ನು ಪತ್ನಿ ಆಲಿಸಲಿಲ್ಲವೆಂದು ಕೋಪಗೊಂಡ ಪತಿಯೊಬ್ಬ ಪತ್ನಿಯನ್ನೇ ಹತ್ಯೆಗೈದ ಘಟನೆ ದಕ್ಷಿಣಕೊಡಗಿನ ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮದಲ್ಲಿ ನಡೆದಿದೆ.
ನಿಟ್ಟೂರು ಗ್ರಾಮದ ನಿವಾಸಿ ಮುತ್ತಕ್ಕಿ (45) ಎಂಬಾಕೆಯೇ ಪತಿಯಿಂದ ಹತ್ಯೆಗೀಡಾದ ದುರ್ದೈವಿ. ಈಕೆಯನ್ನು ಕೊಲೆಗೈದ ಪತಿ ರಾಜು(49)ನನ್ನು ಬಂಧಿಸಲಾಗಿದೆ.
ಕಾರ್ಮಿಕನಾಗಿದ್ದ ರಾಜು ಮನೆಯಲ್ಲಿ ಸಣ್ಣ ಪುಟ್ಟ ವಿಚಾರದಲ್ಲಿ ತನ್ನ ಪತ್ನಿ ಮುತ್ತಕ್ಕಿಯೊಂದಿಗೆ ಕಲಹ ನಡೆಸುತ್ತಿದ್ದನು. ಈ ನಡುವೆ ಈತ ಮಾತನಾಡುವ ವೇಳೆ ಹೆಂಡತಿ ಮುತ್ತಕ್ಕಿ ಅದನ್ನು ಆಲಿಸಲಿಲ್ಲವೆಂದು ಜಗಳ ತೆಗೆದು ಮನೆಯಲ್ಲಿದ್ದ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರ ಗಾಯಗೊಂಡಿದ್ದು ಮನೆಯಲ್ಲಿದ್ದ ಮಕ್ಕಳು ಅಕ್ಕಪಕ್ಕದವರ ಸಹಾಯ ಪಡೆದು ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಸಿದ್ದು, ಮಡಿಕೇರಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾಳೆ.
ವಿಷಯ ತಿಳಿದ ಗೋಣಿಕೊಪ್ಪ ವೃತ್ತ ನಿರೀಕ್ಷಕರಾದ ಗೋವಿಂದರಾಜು ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್ ಹಾಗೂ ಸಿಬ್ಬಂದಿಗಳು ಮೃತಳ ಮನೆಗೆ ತೆರಳಿ ಪರಿಶೀಲನೆ ನಡೆಸಿದರಲ್ಲದೆ, ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.