ವೀರಾಜಪೇಟೆ: ಆನ್ಲೈನ್ ಜೂಜು ಸೇರಿದಂತೆ ಜೂಜಾಟಗಳನ್ನು ನಿಷೇಧಿಸುವ ಮಸೂದೆ ಜಾರಿಯಾಗಿದ್ದು, ಆನ್ಲೈನ್ನಲ್ಲಿ ಹಾಗೂ ಕ್ಲಬ್, ರಿಕ್ರಿಯೇಷನ್ ಕ್ಲಬ್ ಹೀಗೆ ಎಲ್ಲಾ ಕಡೆ ಹಣವಿಟ್ಟು ಜೂಜಾಡುವುದು ಜಾಮೀನು ರಹಿತ ಅಪರಾಧವಾಗಲಿದೆ. ಮೂರು ವರ್ಷದ ಜೈಲು ಶಿಕ್ಷೆಯೂ ಇದ್ದು, ಆದ್ದರಿಂದ ಈ ಬಗ್ಗೆ ಜನರು ಎಚ್ಚರವಾಗಿರಬೇಕು ಎಂದು ಶಾಸಕ ಬೋಪಯ್ಯ ಹೇಳಿದರು.
ವೀರಾಜಪೇಟೆ ನಗರ ಬಿಜೆಪಿ ವತಿಯಿಂದ ಇಲ್ಲಿನ ಪುರಭವನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳಡಿಕೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಈ ಬಾರಿಯ ಅಧಿವೇಶನದಲ್ಲಿ 18 ಮಸೂದೆಗಳು ಜಾರಿಯಾಗಿದ್ದು ಇದರೊಂದಿಗೆ ತಾ.ಪಂ, ಜಿ.ಪಂ, ಪ. ಪಂ.ಗಳ ಕ್ಷೇತ್ರ ಪುನರ್ ವಿಂಗಡನೆ ಮತ್ತು ಮೀಸಲಾತಿ ನಿಗದಿ ಮಸೂದೆಯೂ ಒಂದಾಗಿದೆ. ಇದನ್ನು ಚುನಾವಣಾ ಆಯೋಗದಿಂದ ಬೇರ್ಪಡಿಸಿ ಸ್ಥಳೀಯ
ಸಂಸ್ಥೆಗಳ ಕ್ಷೇತ್ರ ಮತ್ತು ಮೀಸಲಾತಿಯನ್ನು ಸರಕಾರ ನಿಗದಿ ಮಾಡಲಿದೆ. ಇದಕ್ಕಾಗಿ ಈಗಾಗಲೆ ಉಪ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಮುಂದಿನ ಸ್ಥಳೀಯ ಸಂಸ್ಥೆಯ ಕ್ಷೇತ್ರ ಪುನರ್ ವಿಂಗಡನೆ ಮತ್ತು ಮೀಸಲಾತಿಯನ್ನು ಈ ಸಮಿತಿ ರಚಿಸಲಿದೆ. ಇದರ ಆಧಾರದಲ್ಲಿ ಜಿ.ಪಂ,ತಾ.ಪಂ.ಪ.ಪಂ ಚುನಾವಣೆ ಮುಂದೆ ನಡೆಯಲಿದೆ. ಈ ಮೂಲಕ ಆ ಕ್ಷೇತ್ರದಲ್ಲಿ ಹೆಚ್ಚಿನ ಜನಸಂಖ್ಯೆ ಇಲ್ಲದ ಅಭ್ಯರ್ಥಿಗೆ ಮೀಸಲು ನಿಗದಿ ಇತ್ಯಾದಿ ಗೊಂದಲ ನಿವಾರಣೆಯಾಗಲಿದೆ ಎಂದರು.
ಕೊರೋನಾ ಪ್ರಕರಣ ಹೆಚ್ಚಳವಾಗದಂತೆ ಜಾಗ್ರತೆ ವಹಿಸಬೇಕು. ಕೇರಳ ರಾಜ್ಯಕ್ಕೆ ಹೋಗುವ ಬರುವ ಕೆಲಸ ಯಾರೂ ಮಾಡಬೇಡಿ. ಶಾಲೆ ಆರಂಭವಾಗಿದೆ. ಮಕ್ಕಳ ಬಗ್ಗೆ ಸಹ ಕಾಳಜಿ ವಹಿಸಬೇಕು. ಆದ್ದರಿಂದ ಎಲ್ಲರೂ ಲಸಿಕೆ ಪಡೆದು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದು ಹೇಳಿದರು.
ಪಕ್ಷ ಗಟ್ಟಿಯಾಗಿದ್ದರೆ ನಾವೆಲ್ಲ. ಇಲ್ಲವಾದರೆ ನಾವಿಲ್ಲ ಆದ್ದರಿಂದ ಪಕ್ಷ ಸಂಘಟನೆಗೆ ಒತ್ತು ನೀಡಿ ಸಂಘಟಿತರಾಗಬೇಕು. ಕಾಟಾಚಾರಕ್ಕೆ ಸಮಾರಂಭದಲ್ಲಿ ಭಾಗವಹಿಸದೆ ವಿರೋಧ ಪಕ್ಷದ ಬಗ್ಗೆ ಅರಿತು ನಾವು ಸಂಘಟಿತಾಗಿ ಕೆಲಸ ಮಾಡುವಂತಾಗಬೇಕು ಎಂದು ಬೋಪಯ್ಯ ಹೇಳಿದರು.
ವೀರಾಜಪೇಟೆ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್ ಮಾತನಾಡಿ, ವೀರಾಜಪೇಟೆ ವಿಭಾಗದಲ್ಲಿ 191 ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆಯಲ್ಲಿ ಈಗ 187 ಮನೆಗೆ ನಾಮಫಲಕ ಅಳವಡಿಸಲಾಗಿದೆ.ವೀರಾಜಪೇಟೆಯಲ್ಲಿ 13 ನಾಮಫಲಕ ಅಳವಡಿಕೆ ಆಗಿದೆ. ದೇಶಾದಾದ್ಯಂತ ಈ ಕಾರ್ಯಕ್ರಮ ನಡೆಯುತ್ತಿದೆ, ಈ ಮೂಲಕ ಕಟ್ಟ ಕಡೆಯ ಕಾರ್ಯಕರ್ತರಿಗೂ ಮನ್ನಣೆ ಸಿಗಬೇಕು ಹಾಗೂ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆಯಾಗಬೇಕು. ಆ ಮೂಲಕ ಪಕ್ಷ ಗೆಲವು ಸಾಧಿಸಬೇಕು ಎಂಬುದು ಧ್ಯೇಯವಾಗಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಪಳೆಯಂಡ ರಾಬೀನ್ ದೇವಯ್ಯ ಸಭೆಯನ್ನುದ್ದೇಶಿಸಿ ಮಾತನಾಡಿದರು. ಬಿಜೆಪಿ ವೀರಾಜಪೇಟೆ ನಗರ ಅಧ್ಯಕ್ಷ ಟಿ.ಪಿ ಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ವಾಟೇರಿರ ಬೋಪಣ್ಣ ಮತ್ತು ನವೀನ್, ಜಿಲ್ಲಾ ಸಮಿತಿ ಖಜಾಂಚಿ ಮಾಚಯ್ಯ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷೆ ರೀನಾ ಪ್ರಕಾಶ್ ಹಾಗೂ ಪದಾಧಿಕಾರಿಗಳು ಹಾಜರಿದ್ದರು.