ಮಡಿಕೇರಿ: ರಾಜ್ಯದಲ್ಲಿ ವಿವಿಧ ಸಂಘಟನೆಗಳ ನೆರವಿನಿಂದ ವಿದೇಶಿ ಮಿಷನರಿಗಳು ಬಲವಂತದ ಮತಾಂತರದಲ್ಲಿ ತೊಡಗಿದ್ದು, ಮುಂದಿನ ದಿನಗಳಲ್ಲಿ ಇದು ಅಶಾಂತಿಗೆ ಕಾರಣವಾಗಲಿದೆ ಎಂದು ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕಳವಳ ವ್ಯಕಪಡಿಸಿದರಲ್ಲದೆ, ಇದನ್ನು ತಡೆಯಲು ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ರೂಪಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.
ವಿಧಾನಸಭೆಯ ಕಲಾಪದ ಶೂನ್ಯ ವೇಳೆಯಲ್ಲಿ ಮತಾಂತರ ಕುರಿತಂತೆ ವಿಷಯ ಪ್ರಸ್ತಾಪಿಸಿದ ಶಾಸಕ ಗೂಳಿಹಟ್ಟಿ ಶೇಖರ್ರ್ ಅವರು, ಚಿತ್ರದುರ್ಗದಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಮತಾಂತರವಾಗಿದ್ದಾರೆ. ನನ್ನ ಹೆತ್ತ ತಾಯಿಯನ್ನೂ ಮತಾಂತರ ಮಾಡಿದ್ದಾರೆ ಎಂದು ಹೇಳಿದರು. ಕೆಲವು ಚಚ್೯ ಗಳಲ್ಲಿ ಬ್ರೈನ್ ವಾಶ್ ಮಾಡಲಾಗುತ್ತಿದೆ. ನನ್ನ ತಾಯಿಗೂ ಬ್ರೈನ್ ವಾಶ್ ಮಾಡಿದ್ದಾರೆ ಎಂದು ದೂರಿದರು.
ದಲಿತರು, ಹಿಂದುಳಿದ ವರ್ಗದವರನ್ನು ಜಾಸ್ತಿ ಮತಾಂತರ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಪಿಡುಗು. ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕ ಕೆ.ಜಿ.ಬೋಪಯ್ಯ ಅವರು, ಇದು ಗೂಳಿಹಟ್ಟಿ ಶೇಖರ್ ಅವರ ಸಮಸ್ಯೆ ಮಾತ್ರವಲ್ಲ. ಈ ಪಿಡುಗು ರಾಜ್ಯದ ಎಲ್ಲೆಡೆ ಇದೆ. ವಿವಿಧ ಸಂಘಟನೆಗಳ ನೆರವಿನಿಂದ ವಿದೇಶಿ ಮಿಷನರಿಗಳು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಕಾಲೋನಿಗಳನ್ನು ಗುರಿಯಾಗಿಟ್ಟುಕೊಂಡು ಮತಾಂತರದಲ್ಲಿ ತೊಡಗಿದ್ದಾರೆ. ಇದು ಮುಂದೆ ಸಮಾಜದಲ್ಲಿ ಅಶಾಂತಿ ಸೃಷ್ಟಿಗೆ ಕಾರಣವಾಗಲಿದೆ. ಇದಕ್ಕೆ ಉತ್ತರ ಪ್ರದೇಶದ ಮಾದರಿಯಲ್ಲಿ ಕಾನೂನು ರೂಪಿಸುವ ಮೂಲಕ ಕಡಿವಾಣ ಹಾಕಬೇಕಿದೆ ಎಂದು ಸಲಹೆ ಮಾಡಿದರು.
ಸದನದ ಸದಸ್ಯರ ಮಾತುಗಳನ್ನು ಕೇಳಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಆಮಿಷವೊಡ್ಡಿ ಮತಾಂತರ ಮಾಡುವುದು ಅಪರಾಧ. ಶಾಂತಿ ಭಂಗವುಂಟು ಮಾಡುವ ಆತಂಕವೂ ಇದೆ. ಮುಂದೆ ಏನು ಮಾಡಬೇಕು ಎಂಬ ಕುರಿತು ರಾಜ್ಯ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಹೇಳಿದರು.