ಹಾಸನ: ಕಲುಷಿತ ವಾತಾವರಣದಿಂದ ಅನಾರೋಗ್ಯ ಸ್ಥಿತಿ ನಿರ್ಮಾಣವಾಗಿದೆ. ನಾವು ವೈಜ್ಞಾನಿಕ ಹಾಗೂ ತಾಂತ್ರಿಕವಾಗಿ ಹೆಚ್ಚು ಮುಂದುವರೆದಿದ್ದರೂ ಕಸವಿಲೇವಾರಿ ದೊಡ್ಡ ಸಮಸ್ಯೆಯಾಗಿಯೇ ಕಾಡುತ್ತಿದೆ ಎಂದು ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ಎಸ್.ಎ.ನಿತಿನ್ ಹೇಳಿದರು.
ರಾಜೀವ್ ಆಯುರ್ವೇದ ಮಹಾವಿದ್ಯಾಲಯದ ಎನ್.ಎಸ್.ಎಸ್ ಹಾಗೂ ದ್ರವ್ಯಗುಣ ವಿಭಾಗ ವತಿಯಿಂದ ಕೌಶಿಕ ಗ್ರಾಮದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಆಯೋಜಿಸಲಾಗಿದ್ದ ಸ್ವಚ್ಛತಾ ಕಾರ್ಯಕ್ರಮ ಹಾಗೂ ಗಿಡನೆಟ್ಟು ಪರಿಸಿರ ಉಳಿಸಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಸುತ್ತ ಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡಾಗ ಊರು, ನಗರ ಸ್ವಚ್ಛವಾಗುತ್ತದೆ. ನಮ್ಮ ಮನೆಯ ಕಸವನ್ನು ರಸ್ತೆಯ ಬದಿಗೆ ತಂದು ಸುರಿದಾಗ ಇಡೀ ನಗರವೇ ಕಲುಷಿತವಾಗುತ್ತದೆ. ರೋಗ ರುಜಿನಗಳು ಹೆಚ್ಚಾಗಿ ನಾವೇ ಅನಾರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ. ಸ್ವಚ್ಛತೆಯ ಜೊತೆಗೆ ಗಿಡ, ಮರಗಳನ್ನು ಬೆಳಸಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವ ಜೊತೆಗೆ ಪರಿಸರದ ಸಮತೋಲನವನ್ನು ಕಾಪಾಡಬೇಕಿದೆ ಎಂದು ತಿಳಿಸಿದರು.
ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಅಶೋಕ್ ಅವರು ಮಾತನಾಡಿ, ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆ. ರಾಜೀವ್ ಆಯುರ್ವೇದ ಮಹಾವಿದ್ಯಾಲಯದ ವತಿಯಿಂದ ಹಮ್ಮಿಕೊಂಡಿರುವ ಸ್ವಚ್ಛತಾ ಕಾರ್ಯಕ್ರಮ ಶ್ಲಾಘನೀಯ. ಗ್ರಾಮಸ್ಥರೂ ಸಹ ಇವರೊಂದಿಗೆ ಸಹಕರಿಸಿ ಗ್ರಾಮವನ್ನು ಸ್ವಚ್ಛ ಗ್ರಾಮವಾಗಿ ಮಾಡುವ ಕೆಲಸವನ್ನು ಮಡುತ್ತೇವೆ. ಪ್ಲಾಸ್ಟಿಕ್ ಮುಕ್ತ ಗ್ರಾಮ ನಮ್ಮ ಕನಸು ಎಂದರು.
ಕ್ರಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದ್ಯರಾದ ಹನುಮಂತೇಗೌಡ, ನರಸಿಂಹ, ಪ್ರಭು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂಜಪ್ಪ, ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಪಾಂಡುರಂಗ, ಡಾ. ದೀಪ್ತಿ ಪಾಟೀಲ್, ಡಾ. ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಕೌಶಿಕದ ಆಸ್ಪತ್ರೆ, ಶಾಲೆ ಹಾಗೂ ಪಂಚಾಯಿತಿ ಪರಿಸರದಲ್ಲಿ ಔಷಧೀಯ ಗಿಡಗಳನ್ನು ನೆಟ್ಟು ಮಾಹಿತಿ ನೀಡಲಾಯಿತು.
ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಆವರಣದಲ್ಲಿ ರಾಜೀವ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವಿ. ರಾಜೀವ್ ಗಿಡ ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎ.ನಿತಿನ್, ಉಪನ್ಯಾಸಕ ಡಾ. ವಿಜಯ್ ಜಾವಗಲ್, ಡಾ. ಹರ್ಷಿತಾ ಇತರರು ಹಾಜರಿದ್ದರು.