ಹಾಸನ: ಕಾಫಿ ತೋಟದ ನಡುವೆ ಹಾದು ಹೋಗಿದ್ದ ವಿದ್ಯುತ್ ಕಂಬದಲ್ಲಿ ಉಂಟಾದ ಶಾರ್ಟ್ ಸರ್ಕೀಟ್ ನಿಂದಾಗಿ ಎರಡೂವರೆ ಎಕರೆಯಷ್ಟು ಕಾಫಿ ತೋಟ ಸುಟ್ಟು ನಾಶವಾದ ಘಟನೆ ಜಿಲ್ಲೆಯ ಆಲೂರು ತಾಲೂಕು ಕೆ. ಹೊಸಕೋಟೆ ಹೋಬಳಿ ಪುರ ಭೈರವನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಲಕ್ಷ್ಮೇಗೌಡರ ಮಕ್ಕಳಾದ ರಾಜಕುಮಾರ್ ಮತ್ತು ಸಣ್ಣಪ್ಪ ಅವರಿಗೆ ಸೇರಿದ ಎರಡೂವರೆ ಎಕರೆ ಕಾಫಿ ತೋಟ ಸಂಪೂರ್ಣವಾಗಿ ನಾಶವಾಗಿದ್ದು, ಕಾಫಿ ತೋಟವನ್ನು ನಂಬಿ ಜೀವನ ಮಾಡುತ್ತಿದ್ದ ಕುಟುಂಬ ಈಗ ಕಂಗಾಲಾಗಿದ್ದು, ಮುಂದೆ ಜೀವನ ಹೇಗೆ ಎಂಬ ಚಿಂತೆಯಲ್ಲಿ ಕಾಲ ಕಳೆಯುವಂತಾಗಿದೆ.
ರಾಜಕುಮಾರ್ ಮತ್ತು ಸಣ್ಣಪ್ಪ ಅವರಿಗೆ ಒಟ್ಟು ಮೂರೂವರೆ ಎಕರೆ ಜಮೀನು ಇದ್ದು ಇದರಲ್ಲಿ ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಅರೇಬಿಕಾ ಕಾಫಿಯನ್ನು ಬೆಳೆಯಲಾಗಿತ್ತು. ಕಾಫಿಗಿಡಗಳು ಫಸಲು ನೀಡುತ್ತಿದ್ದವು. ಈ ನಡುವೆ ಕಾಫಿ ತೋಟದ ಮಧ್ಯೆ ಹಾದು ಹೋಗಿದ್ದ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕೀಟ್ ಆದ ಕಾರಣ ಬೆಂಕಿ ಕಾಣಿಸಿಕೊಂಡಿದ್ದು ಪರಿಣಾಮ ಎರಡೂವರೆ ಎಕರೆಯಷ್ಟು ಕಾಫಿ ತೋಟವು ಸಂಪೂರ್ಣ ಸುಟ್ಟು ಹೋಗಿದೆ. ಇದೀಗ ಫಸಲು ನೀಡುತ್ತಿದ್ದ ಕಾಫಿ ತೋಟವನ್ನು ಕಳೆದುಕೊಂಡಿರುವ ಕುಟುಂಬ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದೆ.
ನೊಂದ ಕಾಫಿ ಬೆಳಗಾರರ ಸಹಾಯಕ್ಕೆ ಬಂದಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನದ ಕಾರ್ಯದರ್ಶಿ ಶಬ್ಬೀರ್ ಅಹಮದ್ ಅವರು ಮಾತನಾಡಿ ಅತಿ ಸಣ್ಣ ಹಿಡುವಳಿದಾರರಾದ ರಾಜಕುಮಾರ್ ಮತ್ತು ಸಣ್ಣಪ್ಪ ಅವರಿಗೆ ಈ ಘಟನೆಯಿಂದ ಅಪಾರ ನಷ್ಟವಾಗಿದ್ದು, ಕೂಡಲೇ ತಾಲೂಕಿನ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಗಿರುವ ನಷ್ಟವನ್ನು ಅಂದಾಜು ಮಾಡಿ ಸೂಕ್ತ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿದ್ದಾರೆ.