ತಿ.ನರಸೀಪುರ: ಯಾವುದೇ ಸಮಾಜ ಏಳಿಗೆ ಆಗಬೇಕಿದ್ದಲ್ಲಿ ಆ ಸಮುದಾಯದ ಯುವ ಸಮೂಹ ಶೈಕ್ಷಣಿಕವಾಗಿ ಸದೃಢರಾಗುವುದು ಅಗತ್ಯವಾಗಿದ್ದು ಆಗ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಮರಿಗೌಡ ಸ್ಮಾರಕ ಭವನದಲ್ಲಿ ನೂತನ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಸಮುದಾಯದ ಜನರು ಮೌಢ್ಯಗಳನ್ನು ಬಿಟ್ಟು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವ ಕಡೆ ಹೆಚ್ಚು ಗಮನಹರಿಸಬೇಕು. ಹಾಗಾದಲ್ಲಿ ಮಾತ್ರ ಸಾಮಾಜಿಕ, ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಬಲಾಢ್ಯರಾಗಬಹುದು ಎಂದರು.
ನಾನು ಸಾಮಾಜಿಕ ನ್ಯಾಯದ ಅಡಿ ಕಾರ್ಯ ನಿರ್ವಹಿಸುತ್ತೇನೆ. ಅಧಿಕಾರದ ಹಿಂದೆ ಬಿದ್ದು ಸಾಮಾಜಿಕ ನ್ಯಾಯವನ್ನು ಬಿಡುವುದಿಲ್ಲ. ಮುಂದಿನ ಅವಧಿಗೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಮುಂದಿನ ಚುನಾವಣೆಯಲ್ಲಿ ಎಲ್ಲ ಸಮುದಾಯದ ಜನರು ಜಾಗೃತಗೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದರು.
ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂಘಕ್ಕೆ ನನ್ನ ಅಧಿಕಾರಾವಧಿಯಲ್ಲಿ 1ಎಕರೆ ಜಮೀನು ಮಂಜೂರು ಮಾಡಿದ್ದು, ತರಬೇತಿ ಕೇಂದ್ರ ಮತ್ತು ಇನ್ನಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯರ ನೇತೃತ್ವದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿತ್ತು. ಬಡವರ ಪರವಾದ ಸರ್ಕಾರ ಅದಾಗಿತ್ತು. ಬಿಜೆಪಿ ಸರ್ಕಾರ ಸದನದ ಒಳಗೆ ಮತ್ತು ಹೊರಗೆ ಸಿದ್ದರಾಮಯ್ಯರ ಸದ್ದಡಗಿಸಲು ಪ್ರಯತ್ನ ನಡೆಸುತ್ತಿದ್ದು, ಇದು ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಧ್ವನಿ ಎಂಬುದು ಅವರಿಗೆ ತಿಳಿದಿಲ್ಲ ಎಂದು ಗುಡುಗಿದರು.
ಮಾಜಿ ಸಂಸದ ಆರ್ .ಧ್ರುವನಾರಾಯಣ್ ಮಾತನಾಡಿ ಎಚ್.ಡಿ.ಕೋಟೆ, ಕೊಳ್ಳೇಗಾಲ ಇನ್ನಿತರ ಕಡೆ ಕುರುಬ ಜನಾಂಗದ ಸಮುದಾಯ ಭವನಗಳು ನಿರ್ಮಾಣವಾಗಿದ್ದು, ಸಿದ್ದರಾಮಯ್ಯರ ಅಧಿಕಾರಾವಧಿಯಲ್ಲೇ ಜನಾಂಗದ ಸಮುದಾಯ ಭವನ ನಿರ್ಮಿಸಿಕೊಳ್ಳುವ ಸುವರ್ಣಾವಕಾಶವಿತ್ತು. ಮುಂದಿನ ದಿನಗಳಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಜನಾಂಗ ಜನತೆ ಆಸಕ್ತಿ ತೋರಬೇಕು ಎಂದರು.
ಕೇರಳ ಸಂಸದ ರಾಘವನ್, ಶಾಸಕ ಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ ಡಾ .ತಿಮ್ಮಯ್ಯ, ಕಾಂಗ್ರೆಸ್ ಮುಖಂಡ ಸುನಿಲ್ ಬೋಸ್, ಪುರಸಭೆ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ, ಉಪಾಧ್ಯಕ್ಷೆ ನಾಗರತ್ನ ಮಾದೇಶ್, ರಾಜ್ಯ ಕುರುಬ ಸಂಘದ ಅಧ್ಯಕ್ಷ ಬಿ.ಸುಬ್ರಮಣ್ಯ, ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ, ತಾಲೂಕು ಸಂಘದ ಎಂ.ಎಸ್.ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೊತ್ತೇಗಾಲ ಬಸವರಾಜು, ಮಾಜಿ ಅಧ್ಯಕ್ಷ ಪ್ರಶಾಂತ ಬಾಬು, ದೊಡ್ಡೇಬಾಗಿಲು ಮಲ್ಲಿಕಾರ್ಜುನ ಸ್ವಾಮಿ, ಸಂಘದ ನಿರ್ದೇಶಕ ಗುರುಮೂರ್ತಿ, ಮಲ್ಲೇಶ್, ಅಶ್ವಿನ್, ಎಂ .ಡಿ.ಬಸವರಾಜು, ಮಾಜಿ ಜಿ.ಪಂ.ಸದಸ್ಯರಾದ ಸುಧಾ ಮಹದೇವಯ್ಯ, ಪ್ರಭಾಕರ್ ಬಲರಾಮ್, ಎಂ.ಆರ್.ಸೋಮಣ್ಣ, ಕುಪ್ಯ ಭಾಗ್ಯಮ್ಮ ಇತರರು ಹಾಜರಿದ್ದರು.