ಬೇಲೂರು: ಬೇಲೂರು ತಹಸೀಲ್ದಾರ್ ಹಾಗೂ ಪೊಲೀಸರು ದಾಳಿ ನಡೆಸಿ ಮತದಾರರಿಗೆ ಹಂಚಲು ತಂದಿದ್ದ ಲಕ್ಷಾಂತರ ರೂ ಮೌಲ್ಯದ ಗಿಫ್ಟ್ ವಸ್ತುಗಳನ್ನು ವಶಪಡಿಸಿಕೊಂಡಿರುವ ಘಟನೆ ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಹಳೇಬೀಡಿನಲ್ಲಿ ನಡೆದಿದೆ.
ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಬೇಲೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಹುಲ್ಲಹಳ್ಳಿ ಸುರೇಶ್ ಹಳೇಬೀಡಿನಲ್ಲಿ ಎರಡು ದಿನಗಳ ಕಾಲ ಮಹಾರುದ್ರಯಾಗ ಹಾಗೂ ಗಿರಿಜಾ ಕಲ್ಯಾಣೋತ್ಸವ ಆಯೋಜಿಸಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವ ಮಹಿಳೆಯರಿಗೆ ಹಂಚಲು ಕಾರ್ಯಕ್ರಮ ನಡೆಯುತ್ತಿರುವ ಸ್ಥಳದ ಹಿಂಭಾಗದ ಮನೆಯೊಂದರಲ್ಲಿ ಗಿಫ್ಟ್ ವಸ್ತುಗಳನ್ನು ಸಂಗ್ರಹಿಸಿದ್ದರು ಎನ್ನಲಾಗಿದೆ.
ಎಲ್ಲಾ ವಸ್ತುಗಳ ಮೇಲೆ ಹುಲ್ಲಹಳ್ಳಿ ಸುರೇಶ್ ಹೆಸರಿರುವ ಸ್ಟಿಕ್ಕರ್ ಇದ್ದು, ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೇಲೂರು ತಹಸೀಲ್ದಾರ್ ಮಮತಾ, ಇನ್ಸ್ಪೆಕ್ಟರ್ ಶ್ರೀಕಾಂತ್ ಹಾಗೂ ಪೊಲೀಸರ ತಂಡ ಮನೆಯಲ್ಲಿಟ್ಟಿದ್ದ ಬೆಳ್ಳಿದೀಪಗಳು, ಸ್ಟೀಲ್ ಬಾಕ್ಸ್ಗಳು, ಗಿಫ್ಟ್ ವಸ್ತುಗಳು, ಬೆಳ್ಳಿ ದೀಪ ಇತ್ಯಾದಿ ವಸ್ತುಗಳು ವಶಕ್ಕೆ ಪಡೆದಿದ್ದು, ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.