ಹುಣಸೂರು: ಕಳೆದ 15 ವರ್ಷಗಳಿಂದ ತಾಲೂಕಿನಾದ್ಯಂತ ವಿವಿಧ ಕ್ಷೇತ್ರಗಳಲ್ಲಿ ನಡೆದಿರುವ ಅಭಿವೃದ್ಧಿ ಕೆಲಸಗಳು ಹಾಗೂ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನತೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ತಿಳಿಸಿದರು.
ನಗರ ಪತ್ರಕರ್ತ ಭವನದಲ್ಲಿ ಆಯೋಜಿಸಲಾಗಿದ್ದ ಜನಪ್ರತಿನಿಧಿಯಿಂದ ತಾಲೂಕಿನ ಅಭಿವೃದ್ಧಿ ಕುರಿತು ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮತದಾರರ ಮತಭಿಕ್ಷೆಯಿಂದ ಶಾಸಕನ್ನಾಗಿ ಆಯ್ಕೆಯಾದ ನಾನು ಕಳೆದ 15 ವರ್ಷಗಳಿಂದ ಶಿಕ್ಷಣ, ಆರೋಗ್ಯ, ನೀರಾವರಿ ಸೇರಿದಂತೆ ತಾಲೂಕಿನ ವಿವಿಧ ಕ್ಷೇತ್ರಗಳ ಅಭಿವೃದ್ಧಿಗಾಗಿ ನನ್ನ ಶಕ್ತಿ ಮೀರಿ ಶ್ರಮವಹಿಸಿದ್ದೇನೆ. ಕ್ಷೇತ್ರದ ಅಭಿವೃದ್ಧಿಯು ರಾಜ್ಯ ಸರಕಾರ ನೀಡುವ ಅನುದಾನಗಳನ್ನು ಅವಲಂಬಿಸಿರುತ್ತದೆ. ನಾನೂ ಎರಡನೇ ಬಾರಿ ಶಾಸಕನ್ನಾಗಿ ಆಯ್ಕೆಗೊಂಡ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರಕಾರವಿತ್ತು. ನನ್ನ ಪಾಲಿಗೆ ಅದು ಸುವರ್ಣ ಕಾಲವಾಗಿತ್ತು. ಈ ಅವಧಿಯಲ್ಲಿ ತಾಲೂಕಿನಲ್ಲಿ ಅಭಿವೃದ್ಧಿ ಪರ್ವವೇ ನಡೆದಿದೆ. ನನ್ನ ಕನಸಿನ ಅಭಿವೃದ್ಧಿ ಕೆಲಸಗಳು ಇನಷ್ಟು ಬಾಕಿಯಾಗಿವೆ. ಈ ಬಾರಿ ಶಾಸಕನಾಗಿ ಆಯ್ಕೆಯಾದ ಕೂಡಲೇ ಅವುಗಳನ್ನು ಪೂರ್ಣಗೊಳಿಸಲು ಕ್ರಮವಹಿಸುತ್ತೇನೆ. ಮತ್ತೊಮೆ ತಾಲೂಕಿನ ಜನರ ಮತ ಭಿಕ್ಷೆ ಬೇಡುತ್ತೇನೆ ಅವರು ಈ ಬಾರಿಯು ನನ್ನನ್ನು ಆಶೀರ್ವದಿಸಿದ್ದಾರೆ ಎಂದು ಭರವಸೆ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ಮಾಜಿ ಮುಖ್ಯಮಂತ್ರಿ ಡಿ.ದೇವರಾಜ್ ಅರಸ್ರವರ ಕಾಲದಲ್ಲಿ ಹಾರಂಗಿ, ಹನಗೋಡು ನಾಲಾ, ಹುಸೇನ್ಪುರ, ಶಿರಿಯೂರ್ ನಾಲಾ ನೀರಾವರಿ ಕಾಮಗಾರಿ ಸೇರಿದಂತೆ ಒಟ್ಟು ನಾಲ್ಕು ನೀರಾವರಿ ಯೋಜನೆ ಅನುಷ್ಠಾನಗೊಂಡಿದೆ. ನನ್ನ ಅಧಿಕಾರಾವಧಿಯಲ್ಲಿ ಚಿಲ್ಕುಂದ ಹೊರತುಪಡಿಸಿ ಒಟ್ಟು ಏಳು ಏತ ನೀರಾವರಿ ಯೋಜನೆಗಳನ್ನು ಅನುಷ್ಠಾಗೊಳಿಸಿರುವ ಹೆಮ್ಮೆ ನನ್ನಗಿದೆ. ಈ ನೀರಾವರಿ ಯೋಜನೆಗಳಿಂದ ತಾಲೂಕಿನ ಸಾವಿರಾರು ರೈತ ಕುಟುಂಬಗಳಿಗೆ ಅನುಕೂಲವಾಗಿದೆ. ದಿವಂಗತ ದೇವರಾಜ್ ಅರಸು ಬಿಟ್ಟರೆ ನಾನೇ ತಾಲೂಕಿನಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದು ತಾಲೂಕಿನಲ್ಲಿ ಗೆದ್ದ ಮತ್ತ್ಯಾವ ಶಾಸಕರು ನೀರಾವರಿ ಯೋಜನೆಗಳನ್ನು ತಾಲೂಕಿಗೆ ಕೊಡಲಾಗಲಿಲ್ಲ. 47 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಪ್ರಗತಿಯಲ್ಲಿದ್ದು ಸರಕಾರ ೮೪ ಕೋಟಿ ರೂ ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಿದೆ.
ಹುಣಸೂರು ತಾಲೂಕು ಆಸ್ಪತ್ರೆ ಮೈಸೂರು ಜಿಲ್ಲೆಯಲ್ಲೇ ಅತಿಹೆಚ್ಚು ಒತ್ತಡದಿಂದ ಕೆಲಸ ಮಾಡುವ ಆಸ್ಪತ್ರೆಯಾಗಿದೆ. ನಾನೂ ಮೊದಲ ಬಾರಿ ಶಾಸಕನ್ನಾಗಿ ಆಯ್ಕೆಗೊಂಡಾಗ ತಾಲೂಕು ಆಸ್ಪತ್ರೆ ಕಟ್ಟಡ ಮೇಲ್ಛಾವಣಿಯೇ ಕುಸಿಯುವ ಹಂತ ತಲುಪಿತ್ತು, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಆಸ್ಪತ್ರೆ ಕೆಲಸ ನಿರ್ವಹಿಸಲು ಹೆದರುತ್ತಿದ್ದರು. ನನ್ನ ಅವಧಿಯಲ್ಲಿ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಹನಗೋಡು, ನೇರಳಕುಪ್ಪೆ ಪಿಎಚ್ಸಿ ಸೆಂಟರ್ಗಳನ್ನು ಉನ್ನತಿಕರಿಸಿದ್ದನೆ. ಅನುದಾನದ ಕೊರತೆಯಿಂದಾಗಿ ಬಹುನಿರೀಕ್ಷಿತ 200 ಹಾಸಿಗೆವುಳ್ಳ ಸಾರ್ವಜನಿಕ ಆಸ್ಪತ್ರೆ ಕಾಮಗಾರಿ ವಿಳಂಬವಾಗಿದೆ. 2008ಕ್ಕೂ ಮೊದಲು ತಾಲೂಕಿನ ಪ್ರಾಥಮಿಕ, ಫ್ರೌಡಶಾಲೆ, ಪದವಿಪೂರ್ವ, ಪದವಿ ಕಾಲೇಜುಗಳ ಮೂಲಭೂತ ಸೌಕರ್ಯ ಶೋಚನಿಯ ಪರಿಸ್ಥಿತಿಯಲ್ಲಿತ್ತು ಆದರೆ ನಾನೂ ಶಾಸಕನ್ನಾಗಿ ಆಯ್ಕೆಯಾದ ನಂತರ ಎಲ್ಲ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಿಗೆ ಸುಸಜ್ಜಿತ ಕಟ್ಟಡ ದೊರೆತಿದೆ. ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ಪದವಿ ಕಾಲೇಜುವೊಂದರಲ್ಲಿ ಪಿ.ಎಚ್.ಡಿ ಸಂಶೋಧನ ಕೇಂದ್ರವನ್ನು ನನ್ನ ತಾಯಿ ಹೆಸರಿನಲ್ಲಿ ತಾಲೂಕಿನಲ್ಲಿ ಪ್ರಾರಂಭಿಸಿರುವುದು ಸಂತಸದ ವಿಷಯವಾಗಿದೆ ಎಂದರು.
ತಾಲೂಕು ಪತ್ರಕರ್ತ ಸಂಘದ ಅಧ್ಯಕ್ಷ ಹೆಚ್.ಆರ್.ಕೃಷ್ಣಕುಮಾರ್, ಪ್ರಧಾನ ಕಾರ್ಯದರ್ಶಿ ನೇರಳಕುಪ್ಪೆ ಮಹದೇವ್ ಸೇರಿದಂತೆ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.