ಮೈಸೂರು: ರೈಲ್ವೆ ಸಚಿವಾಲಯದ (ರೈಲ್ವೆ ಮಂಡಳಿ) ನಿರ್ದೇಶನಗಳ ಪ್ರಕಾರ, ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಜು.18 ರಿಂದ 23ರವರೆಗೆ ‘ಆಜಾದಿ ಕಿ ರೈಲ್ ಗಾಡಿ ಔರ್ ಸ್ಟೇಷನ್ಸ್’ ಕಾರ್ಯಕ್ರಮದ ಸಾಂಪ್ರದಾಯಿಕ ಸಪ್ತಾಹವನ್ನು ಆಚರಿಸಲಿದೆ. ಇದು 75 ವರ್ಷಗಳ ಸ್ವಾತಂತ್ರ್ಯ ಮತ್ತು ದೇಶದ ಜನರು, ಸಂಸ್ಕೃತಿ ಮತ್ತು ಸಾಧನೆಗಳ ವೈಭವದ ಇತಿಹಾಸವನ್ನು ಸ್ಮರಿಸಲು ಭಾರತ ಸರ್ಕಾರದ ಉಪಕ್ರಮವಾದ ‘ಆಜಾದಿ ಕಾ ಅಮೃತ್ ಮಹೋತ್ಸವ್’ ದೊಂದಿಗೆ ಸಹ ಹೊಂದಿಕೆಯಾಗಲಿದೆ.
ರೈಲ್ವೆ ಸಚಿವಾಲಯವು ನಮ್ಮ ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ 75 ರೈಲು ನಿಲ್ದಾಣಗಳನ್ನು ಗುರುತಿಸಿದೆ ಮತ್ತು ಜೊತೆಯಲ್ಲಿ ಭಾರತದಾದ್ಯಂತ 27 ರೈಲುಗಳನ್ನು ಸಹ ಆರಿಸಿ ಗುರುತಿಸಲಾಗಿದೆ. ಈ ಕಾರಣಕ್ಕಾಗಿ ಶ್ರೀ ಮಹದೇವಪ್ಪ ಮೈಲಾರ ಹಾವೇರಿ ನಿಲ್ದಾಣವು ರೈಲ್ವೆ ನಿಲ್ದಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದರೆ, ನೈಋತ್ಯ ರೈಲ್ವೆ ಮೈಸೂರು ವಿಭಾಗದ ರೈಲುಗಳ ವಿಭಾಗದಲ್ಲಿ ಟಿಪ್ಪು ಎಕ್ಸ್ಪ್ರೆಸ್ ಅನ್ನು ನಾಮನಿರ್ದೇಶನ ಮಾಡಲಾಗಿದೆ.
ಜು.18 ರಂದು 4 ಗಂಟೆಗೆ ರೈಲ್ವೆ ಮಂಡಳಿಯ ರೈಲ್ವೆ ಭವನದಿಂದ ಕೇಂದ್ರ ಕಾರ್ಯದ ಆಚರಣೆಯಾದ ‘ಸಾಂಪ್ರದಾಯಿಕ ಸಪ್ತಾಹ – ಐಕಾನಿಕ್ ವೀಕ್’ ಅನ್ನು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ವಿ.ಕೆ.ತ್ರಿಪಾಠಿ ರವರು ಉದ್ಘಾಟಿಸಲಿದ್ದಾರೆ. ‘ಆಜಾದಿ ಕಿ ರೈಲ್ ಗಾಡಿ ಔರ್ ಸ್ಟೇಷನ್ಸ್’ ಅನ್ನು ಗರಿಷ್ಠ ಮಂದಿ ನಾಗರಿಕರಿಗೆ ಸಂಪರ್ಕಿಸುವ ದೃಷ್ಟಿಯಿಂದ ಮತ್ತು ಭಾರತವನ್ನು ತನ್ನ ವಿಕಸನೀಯ ಪ್ರಯಾಣದಲ್ಲಿ ಇಲ್ಲಿಯವರೆಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿರುವುದಷ್ಟೇ ಅಲ್ಲದೆ ‘ಆತ್ಮನಿರ್ಭರ ಭಾರತ್’ದ ಚೈತನ್ಯದಿಂದ ಉತ್ತೇಜಿಸಲ್ಪಟ್ಟ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿಯವರ ದೃಷ್ಟಿಯಾದ ಭಾರತ 2.0 ಅನ್ನು ಸಕ್ರಿಯಗೊಳಿಸುವ ಸಾಮರ್ಥ್ಯ ಹಾಗು ಶಕ್ತಿಯನ್ನು ಹೊಂದಿರುವ ಭಾರತದ ಜನರಿಗೆ ಸಮರ್ಪಿಸುವ ಭಾವನೆಯೊಂದಿಗೆ ಆಯೋಜಿಸಲಾಗಿದೆ.
ರೈಲ್ವೆ ಮಂಡಳಿಯ ನಿರ್ದೇಶನಗಳ ಪ್ರಕಾರ, ಮೈಸೂರು ವಿಭಾಗವು ಶ್ರೀ ಮಹದೇವಪ್ಪ ಮೈಲಾರ ಹಾವೇರಿ ರೈಲ್ವೆ ನಿಲ್ದಾಣದ ವ್ಯಾಪ್ತಿಯಲ್ಲಿರುವ ರೈಲ್ವೆಯ ಎಲ್ಲಾ ಪಾಲುದಾರರೊಂದಿಗೆ, ಶಾಲಾ-ಕಾಲೇಜುಗಳು ಮತ್ತು ವಸತಿ ಕಾಲೋನಿಗಳನ್ನು ಸೇರಿಸಿಕೊಂಡು ವಾರಪೂರ್ತಿ ಕಾರ್ಯಕ್ರಮಗಳ ಸರಣಿಯನ್ನು ಆಯೋಜಿಸಿದೆ.
ವಾರ ಪೂರ್ತಿ ಶ್ರೀ ಮಹಾದೇವಪ್ಪ ಮೈಲಾರ ಹಾವೇರಿ ನಿಲ್ದಾಣದ ದೀಪಾಲಂಕಾರ ಮತ್ತು ಸಿಂಗಾರ, ಡಿಜಿಟಲ್ ಪರದೆ ಅಳವಡಿಸುವುದು ಮತ್ತು ಐತಿಹಾಸಿಕ ವಿಷಯಗಳ ಛಾಯಾಚಿತ್ರ ಪ್ರದರ್ಶನ, ವೀಡಿಯೋ ಚಿತ್ರ, ದೇಶಭಕ್ತಿ ಗೀತೆಗಳು, ಸ್ಥಳೀಯ ಭಾಷೆಯಲ್ಲಿ ತನ್ನದೇ ಆದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಬಗ್ಗೆ ಬೀದಿ ನಾಟಕವನ್ನು ಪ್ರತಿದಿನ 6 ಗಂಟೆಯಿಂದ 7 ಗಂಟೆಯವರೆಗೆ ಒಂದು ಗಂಟೆಗಳ ಕಾಲ ನಡೆಸಲಾಗುವುದು. ವಾರದ ಕೊನೆಯ ದಿನದಂದು ತಮ್ಮ ಕಥೆಯನ್ನು ಹಂಚಿಕೊಳ್ಳಲು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರನ್ನು ಆಹ್ವಾನಿಸಿ,, ನಿಲ್ದಾಣದಲ್ಲಿ ‘ಆಜಾದಿ ಕಿ ರೈಲ್ ಗಾಡಿ ಔರ್ ಸ್ಟೇಷನ್’ ಸಂದರ್ಭದಲ್ಲಿ ಸೆಲ್ಫಿ ಪಾಯಿಂಟ್ ರಚಿಸಲಾಗುತ್ತದೆ.
ಈ ಸಂದರ್ಭದಲ್ಲಿ, ಭಾರತೀಯ ಸ್ವಾತಂತ್ರ್ಯ ಚಳವಳಿಯ ಇತಿಹಾಸದಲ್ಲಿ ಮತ್ತು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಅವರು ನಿರ್ವಹಿಸಿದ ಪ್ರಮುಖ ಪಾತ್ರದ ಸ್ಮರಣಾರ್ಥವಾಗಿ, ಐಕಾನಿಕ್ ದಿನದಂದು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರು ಅಥವಾ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಸದಸ್ಯರು ಮೈಸೂರಿನಿಂದ ಟಿಪ್ಪು ಎಕ್ಸ್ಪ್ರೆಸ್ ಅನ್ನು ಬಾವುಟ ತೋರಿಸುವ ಮೂಲಕ ಪ್ರಾರಂಭ ಮಾಡಲು ಯೋಜಿಸಲಾಗಿದೆ.