ಮೈಸೂರು: ಅಖಿಲ ಭಾರತೀಯ ಗ್ರಾಹಕ ಪಂಚಾಯತ್ನ (ಎಬಿಜೆಪಿ) ಚಟುವಟಿಕೆಗಳನ್ನು ತಾಲೂಕು ಮತ್ತು ಗ್ರಾಮ ಮಟ್ಟಕ್ಕೆ ಪರಿಣಾಮಕಾರಿ ಯಾಗಿ ವಿಸ್ತರಿಸಿ, ಕೃಷಿಕರ ಸಮಸ್ಯೆಗಳನ್ನು ಪರಿಹರಿಸಲು ಹೆಚ್ಚು ಒತ್ತು ನೀಡಬೇಕಿದೆ ಎಂದು ಎಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಹಾಗೂ ಮುಖ್ಯ ವಕ್ತಾರ ವಿಜಯ್ ಸಾಗರ್ ಹೇಳಿದರು.
ಮೈಸೂರಿನ ಜೆಎಲ್ಬಿ ರಸ್ತೆಯ ಮಾಧವ ಕೃಪಾದ ಸಭಾಂಗಣದಲ್ಲಿ ಎಬಿಜೆಪಿ ಮೈಸೂರು ಜಿಲ್ಲಾ ಘಟಕದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗ್ರಾಹಕರ ಹಿತ ಚಿಂತನಾ ಸಭೆಯನ್ನು ಭಾರತಾಂಬೆ ತಾಯಿ ಚಿತ್ರಪಟಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿ, ಎಬಿಜಿಪಿ ಸಂಘಟನೆ ಆರ್ಎಸ್ಎಸ್ನ ಅಂಗ ಸಂಸ್ಥೆಗಳಲ್ಲಿ ಒಂದಾಗಿದ್ದು, ಇದು ರಾಷ್ಟ್ರ ಮಟ್ಟದ ಸಂಘಟನೆಯಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕರೇ ಆಗಿರುತ್ತಾರೆ. ಆಸಕ್ತರು ನಮ್ಮ ಸಂಘಟನೆ ಯಲ್ಲಿ ತೊಡಗಿಸಿಕೊಂಡು ಗ್ರಾಹಕ ಜಾಗೃತಿಗೆ ಕೈಜೋಡಿಸಿ ತನ್ನದೇ ವೆಬ್ ಸೈಟ್ ಸಹ ಹೊಂದಿದೆ.
ರಾಷ್ಟ್ರಾದ್ಯಂತ ನಡೆಸುವ ಬಹುತೇಕ ಎಲ್ಲಾ ಚಟುವಟಿಕೆ ಗಳ ಮಾಹಿತಿ ಇಲ್ಲಿ ದೊರೆಯಲಿದೆ. ಜೊತೆಗೆ ಆಸಕ್ತರು ಈ ವೆಬ್ ಸೈಟ್ ಮೂಲಕವೇ ಸದಸ್ಯತ್ವ ಪಡೆದುಕೊಳ್ಳಲು ಅವಕಾಶವಿದೆ. ಎಬಿಜೆಪಿ ವತಿಯಿಂದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಎಎಲ್) ಮೂಲಕವೂ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಸರ್ಕಾರಿ ಕಚೇರಿ ವ್ಯವಸ್ಥೆಯಲ್ಲಿ ತಪ್ಪುಗಳಿದ್ದರೆ ಅದನ್ನು ಸರಿಪಡಿಸುವ ನಿಟ್ಟಿನಲ್ಲಿಯೂ ನಮ್ಮ ಸಂಘಟನೆ ಕಾರ್ಯನಿರ್ವ ಹಿಸುತ್ತಿದೆ. ಆದರೆ ಇದಕ್ಕಾಗಿ ಪ್ರತಿಭಟನಾ ಧರಣಿಯ ಹಾದಿಯನ್ನು ಹಿಡಿಯದೇ ಕಾನೂನಾತ್ಮಕ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಮ್ಮ ಚಿಂತನೆ ಗ್ರಾಹಕರ ಹಿತವೇ ಆಗಿದೆ ಎಂದು ತಿಳಿಸಿದರು.
ಗ್ರಾಹಕರ ಹಕ್ಕುಗಳ ರಕ್ಷಣೆಗೆ ‘ಗ್ರಾಹಕ ಸಂರಕ್ಷಣ ಕಾಯ್ದೆ 2019 ಮಹತ್ವದ ಕಾನೂನಿನ ಅಸ್ತವಾಗಿದೆ. ಸ್ವಾವಲಂಬಿ ಭಾರತದ ಉದ್ದೇಶಕ್ಕಾಗಿ ಬೇರೆ ಬೇರೆ ಸಂಘಟನೆಗಳ ಸಹಯೋಗದೊಂದಿಗೆ ಎಬಿಜೆಪಿ ಕಾರ್ಯ ನಿರ್ವಹಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರಾಂತ ಮುಖ್ಯ ಸಂಚಾಲಕ ರಾಜೇಶ್, ಮಹಿಳಾ ಪ್ರಮುಖರಾದ ಗಾಯತ್ರಿ ,ವಾಣಿ ಭಾಸ್ಕರ್,ಮೈಸೂರು ಜಿಲ್ಲಾಧ್ಯಕ್ಷ ರವಿ ಶಂಕರ್ ,ಸಂಘಟನಾ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಮತ್ತಿತರರು ಹಾಜರಿದ್ದರು.