ಮೈಸೂರು: ಕಾಡಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಆದಿವಾಸಿಯ ಕುಟುಂಬಕ್ಕೆ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಚಂದನ್ ಗೌಡ ಸಾಂತ್ವನ ಹೇಳಿ ವೈಯಕ್ತಿಕವಾಗಿ ಪರಿಹಾರ ವಿತರಿಸಿದರು.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಮಾಳ ಹಾಡಿಯಲ್ಲಿ ಕಾಡಾನೆ ದಾಳಿಯಿಂದಾಗಿ ರೈತ ಪುಟ್ಟಪ್ಪ(75) ಮೃತಪಟ್ಟಿದ್ದರು. ವಿಷಯ ತಿಳಿದು ಶುಕ್ರವಾರ ಬೆಳಗ್ಗೆ ಆನೆಮಾಳ ಹಾಡಿಗೆ ಭೇಟಿ ನೀಡಿದ ಚಂದನ್ ಗೌಡ,ಕಾಡಂಚಿನ ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಆಲಿಸಿದರು. ಬಳಿಕ ಮೃತಪಟ್ಟ ಪುಟ್ಟಪ್ಪ ಅವರ ಕುಟುಂಬದವರನ್ನು ಭೇಟಿಯಾಗಿ ಸಾಂತ್ವನ ಹೇಳಿ, ವೈಯಕ್ತಿಕವಾಗಿ ಸಹಾಯಧನ ವಿತರಿಸಿ,ಸರ್ಕಾರದಿಂದ ಬರಬೇಕಿರುವ ಪರಿಹಾರವನ್ನು ದೊರಕಿಸಿಕೊಡುವ ಭರವಸೆ ನೀಡಿದರು.
ಅಲ್ಲದೇ ಸಂಬಂಧಪಟ್ಟ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಿ, ಕಾಡುಪ್ರಾಣಿಗಳ ದಾಳಿ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿ,ಮೃತ ರೈತನ ಕುಟುಂಬಕ್ಕೆ ಕೂಡಲೇ ಪರಿಹಾರ ಒದಗಿಸಬೇಕೆಂದು ಚಂದನ್ ಗೌಡ ಅವರು ಮಾಡಿದ ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿಗಳು, ಅರಣ್ಯ ಇಲಾಖೆ ವತಿಯಿಂದ ಕೊಡ ಮಾಡಲಾಗುವ ಪರಿಹಾರದ ಚೆಕ್ ಅನ್ನು ಕುಟುಂಬವರ್ಗಕ್ಕೆ ಹಸ್ತಾಂತರಿಸಿದರು.
ಇದೇ ವೇಳೆ ಅಂತರಸಂತೆ ವಲಯದ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಚಂದನ್ ಗೌಡ ಮತ್ತು ಸಂಘದ ಪದಾಧಿಕಾರಿಗಳು, ಅಲ್ಲಿನ ಅಂಗನವಾಡಿಯ ದುಸ್ಥಿತಿಯ ಕುರಿತು ಚರ್ಚಿಸಿದರಲ್ಲದೇ, ಅಂಗನವಾಡಿ ಅಭಿವೃದ್ದಿಗೆ ಹಾಗೂ ಅಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೆ ವೈಯಕ್ತಿಕವಾಗಿ ನೆರವು ನೀಡಲು ಸಿದ್ದರಿದ್ದು, ದಯಮಾಡಿ ಅಭಿವೃದ್ದಿ ಬಗ್ಗೆ ಗಮನ ಹರಿಸಬೇಕೆಂದು ಪಂಚಾಯಿತಿ ಸದಸ್ಯರಲ್ಲಿ ಮನವಿ ಮಾಡಿದರು.
ರೈತ ಕಲ್ಯಾಣ ಸಂಘದ ಎಚ್.ಡಿ.ಕೋಟೆ ತಾಲೂಕು ಅಧ್ಯಕ್ಷರಾದ ನವೀನ್ ಗೌಡ, ಮೋಸಿನ್ ವೀರಣ್ಣ, ಬೇಬಿ,ಅಂತರಸಂತೆ ಘಟಕದ ಅಧ್ಯಕ್ಷ ಮಂಜುಗೌಡ್ರು, ಸದಾನಂದ, ನಂಜನಗೂಡು ತಾಲೂಕು ಘಟಕದ ಹೇಮಂತ್ ಗೌಡ, ಅಭಿ ಸಂಜಯ್, ಹರೀಶ್ ಪಿ.ಗೌಡ, ಮೂರ್ತಿ ಸೇರಿದಂತೆ ಸಂಘದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಹಾಜರಿದ್ದರು.