ಮೈಸೂರು: ನಗರ ವ್ಯಾಪ್ತಿಯ ಟ್ರಾಫಿಕ್ ಸಿಗ್ನಲ್ಗಳ ಬಳಿ, ಪ್ರಮುಖ ವೃತ್ತಗಳಲ್ಲಿ ಮತ್ತು ಮುಖ್ಯ ಬೀದಿಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಭಿಕ್ಷೆ ಬೇಡುವುದು ಹೆಚ್ಚಾಗುತ್ತಿದ್ದು, ಇದರಿಂದ ಸಾರ್ವಜನಿಕರಿಗೆ ಮತ್ತು ಪ್ರವಾಸಿಗರಿಗೆ ಮುಜುಗರ, ತೊಂದರೆ ಆಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಭಿಕ್ಷಾಟನೆಯನ್ನು ತಡೆಗಟ್ಟುವ ಸಂಬಂಧ ಕಾರ್ಯಾಚರಣೆ ನಡೆಸಲಾಗಿದ್ದು, ಒಂದು ಹೆಣ್ಣು, ಐದು ಗಂಡು ಮಕ್ಕಳು, ೩ ಜನ ತಾಯಿಂದಿರೊಂದಿಗೆ ೩ ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಒಬ್ಬ ವೃದ್ದರನ್ನು ರಕ್ಷಣೆ ಮಾಡಲಾಗಿದೆ.
ಎರಡು ವಿಶೇಷ ತಂಡಗಳ ಮೂಲಕ ನಗರದ ಕೆ.ಆರ್. ಸರ್ಕಲ್, ಸಬರ್ಬ ಬಸ್ ನಿಲ್ದಾಣ, ಮೈಸೂರು ಜೂ ಹತ್ತಿರ, ಬಂಡಿಪಾಳ್ಯ, ಎ.ಪಿ.ಎಂ.ಸಿ ಸಿಗ್ನಲ್ ಬಳಿ, ಕೊಲಂಬಿಯಾ ಏಷಿಯಾ ಆಸ್ಪತ್ರೆ ವೃತ್ತ, ಜೆ.ಎಸ್.ಎಸ್. ಡೆಂಟಲ್ ಕಾಲೇಜ್, ಹಿನಕಲ್, ವಿ.ವಿ.ಪುರಂ, ಒಂಟಿಕೊಪ್ಪಲ್ ದೇವಸ್ಥಾನ ವೃತ್ತ, ಬೋಗಾದಿ ವೃತ್ತ, ಮಾತೃಮಂಡಳಿ ಸರ್ಕಲ್, ವಿ.ವಿ. ಪುರಂ ಬಸ್ ನಿಲ್ದಾಣ, ಬೋಗಾದಿ ರಿಂಗ್ ರೋಡ್, ನಗರ ಬಸ್ ನಿಲ್ದಾಣ, ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ, ಪ್ರಭಾ ಚಿತ್ರಮಂದಿರ, ಗಾಂಧಿ ವೃತ್ತ, ಸೇಂಟ್ ಪಿಲೋಮಿನಾ ಚರ್ಚ್ ಮೀನಾಬಜಾರ್, ದೇವರಾಜ ಅರಸು ರಸ್ತೆ, ಗಾಂಧಿಚೌಕ ಕಡೆಗಳಲ್ಲಿ ಕಾರ್ಯಾಚರಣೆಯನ್ನು ನಡೆಸಲಾಗಿತ್ತು.
ಈ ವೇಳೆ ಭಿಕ್ಷಾಟನೆಯಲ್ಲಿ ತೊಡಗಿದ್ದ ಒಂದು ಹೆಣ್ಣು, ಐದು ಗಂಡು ಮಕ್ಕಳು, ಮೂರು ಜನ ತಾಯಿಂದಿರೊಂದಿಗೆ ಮೂರು ಮಕ್ಕಳು, ಇಬ್ಬರು ಮಹಿಳೆಯರು ಮತ್ತು ಒಬ್ಬ ವೃದ್ದರನ್ನು ರಕ್ಷಣೆ ಮಾಡಲಾಗಿರುತ್ತದೆ. ರಕ್ಷಣೆ ಮಾಡಿದ ಮಕ್ಕಳು, ಮಹಿಳೆಯರು ಮತ್ತು ವೃದ್ದರನ್ನು ಪುನರ್ ವಸತಿಗಾಗಿ ಬಾಲಕಿಯರ ಬಾಲಮಂದಿರ, ಬಾಲಕರ ಬಾಲಮಂದಿರ, ಸ್ತ್ರೀ ಸೇವಾನಿಕೇತನ ಹಾಗೂ ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಲಾಗಿದೆ.
ಮೈಸೂರು ನಗರದ ಡಿ.ಸಿ.ಪಿ. (ಕೇಂದ್ರಸ್ಥಾನ, ಅಪರಾಧ ಮತ್ತು ಸಂಚಾರ) ಗೀತಪ್ರಸನ್ನ ಮಾರ್ಗದರ್ಶನದಲ್ಲಿ ದೇವರಾಜ ವಿಭಾಗದ ಎಸಿಪಿ ಶಶಿಧರ್, ಮಹಿಳಾ ಪೊಲೀಸ್ ಠಾಣೆ ಹಾಗೂ ಮಾನವ ಕಳ್ಳಸಾಗಾಣೆ ವಿರೋಧಿ ಘಟಕದ ಪೊಲೀಸ್ ಇನ್ಸ್ಪೆಕ್ಟರ್ ಅರುಣಕುಮಾರಿ, ಪಿ.ಎಸ್.ಐ. ಜ್ಯೋತಿರಾವ್ ಮತ್ತು ಎಸ್.ಜೆ.ಪಿಯು ಘಟಕದ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳಾದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಅಪೇಕ್ಷಿತ ಹಾಗೂ ಔಟ್ ರೀಚ್ ವರ್ಕರ್ ದೇವಕಿ ಮತ್ತು ಭಾಸ್ಕರ್, ಮಕ್ಕಳ ಸಹಾಯವಾಣಿ -1098ರ ಟೀಂ ಸದಸ್ಯರಾದ ಕಾವ್ಯಶ್ರೀ ಮತ್ತು ಥೆರೆಸಾ ಮೇರಿರವರು, ಸಮಾಜ ಕಲ್ಯಾಣ ಇಲಾಖೆ, ನಿರಾಶ್ರಿತರ ಪುನರ್ವಸತಿ ಕೇಂದ್ರದ ಮುಖ್ಯಪಾಲಕರಾದ ಶಿವಕುಮಾರ್ ಹಾಗೂ ಪಾಪನಾಯಕ, ಫಯಾಜ್ ಅಹಮದ್, ಶ್ರೀರಾಮ ಹಾಗೂ ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕರಾದ ಶಶಿಧರ್ ಮೊದಲಾದವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ಈ ಕಾರ್ಯವನ್ನು ಮೈಸೂರು ನಗರದ ಪೊಲೀಸ್ ಆಯುಕ್ತ ಡಾ ಚಂದ್ರಗುಪ್ತ ಅವರು ಪ್ರಶಂಸಿಸಿದ್ದಾರೆ.