ಯಳಂದೂರು: ಪಟ್ಟಣದಲ್ಲಿರುವ ಕೃಷಿ ಇಲಾಖೆಯ ಕಚೇರಿಯ ಮುಖ್ಯ ಬಾಗಿಲ ಮುಂಭಾಗದಲ್ಲಿ ಇಲಾಖೆಯ ಸಹಾಯಕ ನಿರ್ದೇಶಕರ ವಾಹನ ನಿಲ್ಲುವುದರಿಂದ ವಯೋವೃದ್ಧರು, ವಿಶೇಷ ಚೇತನರು ಹಾಗೂ ರೈತರು ಕಚೇರಿಗೆ ತಲುಪಲು ಹರಸಾಹಸ ಪಡುವಂತಾಗಿದೆ.
ಇಲಾಖೆ ಕಚೇರಿಯ ಮುಂಭಾಗ ಕಾಂಕ್ರೀಟ್ನ ಶೆಲ್ಟರ್ ಮಾಡಲಾಗಿದೆ. ಇಲ್ಲಿ ಸಹಾಯಕ ನಿರ್ದೇಶಕರ ಕಾರು ನಿಂತಿರುತ್ತದೆ. ಅಲ್ಲದೆ ಕಚೇರಿಯ ಕೆಲ ಸಿಬ್ಬಂದಿಯೂ ಬೈಕ್ಗಳನ್ನು ಇಲ್ಲೇ ನಿಲ್ಲಿಸಿರುತ್ತಾರೆ. ಕಚೇರಿ ಮುಂಭಾಗ ವಿಶಾಲವಾದ ಸ್ಥಳವಿದ್ದರೂ ಪ್ರತ್ಯೇಕವಾಗಿ ವಾಹನ ನಿಲ್ಲಿಸಲು ಶೆಲ್ಟರ್ ಮಾಡಿಲ್ಲ. ಇದರ ಬಳಿಯಲ್ಲೇ ರೈತ ಸಂಪರ್ಕ ಕೇಂದ್ರವೂ ಇದೆ. ಕಳೆದ ಒಂದು ವಾರದಿಂದಲೂ ಮಳೆ ಸುರಿಯುತ್ತಿದ್ದು ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದೆ.
ಕಚೇರಿಗೆ ಬರುವ ರೈತರ ಸಂಖ್ಯೆಯೂ ಅಧಿಕವಾಗಿದೆ. ಅದರಲ್ಲೂ ವಯೋವೃದ್ಧರೂ, ವಿಶೇಷ ಚೇತನರೂ ಬಂದಾಗ ಕಚೇರಿಯ ಒಳ ಹೋಗಲು ಪರದಾಡುವ ಸ್ಥಿತಿ ಇದೆ. ಇದರ ಮುಂಭಾಗದಲ್ಲಿ ಮಳೆ ನೀರು ನಿಲ್ಲುವುದರಿಂದ ಈ ಸ್ಥಳವೂ ಕೊಚ್ಚೆಯಾಗಿದ್ದು ಜಾರಿ ಬೀಳುವ ಅಪಾಯವೂ ಇರುತ್ತದೆ. ಇದರ ನಡುವೆ ವಾಹನಗಳನ್ನು ನಿಲ್ಲಿಸುವುದರಿಂದ ಒಳಗೆ ಹೋಗಲು ತೊಂದರೆಯಾಗುತ್ತಿದೆ. ವಿಶೇಷಚೇತನರು ತಮ್ಮ ತ್ರಿಚಕ್ರ ವಾಹನಗಳಲ್ಲಿ ಇಲ್ಲಿಗೆ ಬಂದರೆ ಹೊರಗೆ ತಮ್ಮ ವಾಹನ ನಿಲ್ಲಿಸಿ ಪ್ರಯಾಸದಿಂದ ಕಚೇರಿಗೆ ತೆರಳುವ ಸ್ಥಿತಿ ಇದ್ದು ಜಾರಿ ಬೀಳುವ ಅಪಾಯವೂ ಇದೆ. ಈ ಬಗ್ಗೆ ಸಂಬಂಧಪಟ್ಟವರು ಸೂಕ್ತ ಕ್ರಮ ವಹಿಸಬೇಕು ಎಂದು ರೈತ ಮಹೇಶ್ ಸೇರಿದಂತೆ ಹಲವರ ಆಗ್ರಹವಾಗಿದೆ.
ಸೋಮಶೇಖರ್, ಉಪನಿರ್ದೇಶಕರು, ಕೃಷಿ ಇಲಾಖೆ ಚಾಮರಾಜನಗರ: ಕೃಷಿ ಇಲಾಖೆಯ ಕಚೇರಿ ಮುಂಭಾಗ ವಾಹನ ನಿಲ್ಲಿಸುವಂತಿಲ್ಲ. ಈ ಬಗ್ಗೆ ದೂರು ಬಂದಿದ್ದು ಕೂಡಲೇ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿ ಇಲ್ಲಿ ವಾಹನ ನಿಲ್ಲಿಸದಂತೆ ಕ್ರಮ ವಹಿಸಲಾಗುವುದು.