ಚಾಮರಾಜನಗರ: ರಾಜ್ಯದ ಕಬಿನಿ ಹಾಗೂ ಕೆಆರ್ಎಸ್ ಜಲಾಶಯಗಳು ಭರ್ತಿಯಾಗಿನದಿಗೆ ಹೆಚ್ಚುವರಿ ನೀರು ಬಿಡುತ್ತಿರುವುದರಿಂದ ನೆರೆಯ ತಮಿಳುನಾಡಿನ ಮೆಟ್ಟೂರು ಜಲಾಶಯ ಭರ್ತಿಯಾಗಿದೆ.
ಸಾಮಾನ್ಯವಾಗಿ ಅಕ್ಟೋಬರ್ ನವೆಂಬರ್ ಅವಧಿಯಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ ಈ ಬಾರಿ ಜುಲೈನಲ್ಲೇ ತುಂಬಿದ್ದು, ಇದರಿಂದ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ತಮಿಳುನಾಡಿನ ಪಾಲಿನ ನೀರಿಗಿಂತಲೂ ಹೆಚ್ಚಿನ ನೀರು ಹರಿದು ಹೋಗುತ್ತಿದೆ.
ಈಗಾಗಲೇ ಜಲಾಶಯದ 16 ಗೇಟ್ಗಳಿಂದಲೂ ನೀರು ನದಿಗೆ ಬಿಡಲಾಗುತ್ತಿದೆ. 120 ಅಡಿಗಳಷ್ಟು ಗರಿಷ್ಠ ಮಟ್ಟ ಹೊಂದಿರುವ ಮೆಟ್ಟೂರು ಜಲಾಶಯವು 93.4 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ.
ಮೂರು ದಿನಗಳಲ್ಲಿ ಜಲಾಶಯಕ್ಕೆ 15 ಅಡಿಗಳಷ್ಟು ನೀರು ಹರಿದು ಬಂದಿದೆ. ಬುಧವಾರ ಅಣೆಕಟ್ಟೆಯ ನೀರಿನ ಮಟ್ಟ 105.810 ಅಡಿಗಳಷ್ಟಿತ್ತು. ಶನಿವಾರ ಬೆಳಿಗ್ಗೆ ನೀರಿನ ಮಟ್ಟ 120 ಅಡಿ ತಲುಪಿದೆ. ಜಲಾಶಯದ ಒಳಹರಿವು 1.15 ಲಕ್ಷ ಕ್ಯುಸೆಕ್ ನಷ್ಟಿದೆ. 50 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆಯಿಂದ ತಮಿಳುನಾಡಿನ ಜಲಾಶಯಗಳು ಭರ್ತಿಯಾಗುತ್ತಿವೆ.