ಚಾಮರಾಜನಗರ: ನಗರದಿಂದ ತಮಿಳುನಾಡಿನ ಸತ್ಯಮಂಗಲಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಯ ಹಾಸನೂರು ಬಳಿ ಎರಡು ಕಾಡಾನೆಗಳು ವಾಹನಗಳ ಮೇಲೆ ದಾಳಿ ಮಾಡಲು ಯತ್ನಿಸಿದ ಘಟನೆ ಸತ್ಯಮಂಗಲಕ್ಕೆ ಹೋಗುವ ಹೆದ್ದಾರಿಯ ಕರ್ನಾಟಕದ ಗಡಿ ದಾಟಿದ ಬಳಿಕ ಸಿಗುವ ತಮಿಳುನಾಡಿನ ಹಾಸನೂರಿನ ಚೆಕ್ ಪೋಸ್ಟ್ನಲ್ಲಿ ನಡೆದಿದೆ.
ಮರಿಯಾನೆಯೊಂದಿಗಿದ್ದ ಎರಡು ಹೆಣ್ಣಾನೆಗಳು ವಾಹನಗಳ ಮೇಲೆ ಎರಗಲು ಯತ್ನಿಸಿವೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲವಾದರೂ ಒಂದು ಕಾರಿಗೆ ಭಾಗಶಃ ಹಾನಿಯಾಗಿದೆ. ಈ ಘಟನೆ ಕುರಿತಂತೆ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಅದು ವೈರಲ್ ಆಗಿದೆ.
ಮರಿಯೊಂದಿಗೆ ರಸ್ತೆಯಲ್ಲಿ ಬರುತ್ತಿದ್ದ ಆನೆಗಳು ಬೊಲೆರೊ ಹಾಗೂ ಕಾರೊಂದರ ಮೇಲೆ ದಾಳಿಗೆ ಮುಂದಾಗುವ ದೃಶ್ಯ ಇದಾಗಿದ್ದು, ಕಾರಿನ ಹಿಂಬದಿಯಿಂದ ವ್ಯಕ್ತಿಯೊಬ್ಬರು ಹೊರ ಬರುತ್ತಿರುವ ದೃಶ್ಯವೂ ಈ ವಿಡಿಯೋದಲ್ಲಿದೆ. ಈ ಘಟನೆಯಿಂದಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ತೊಂದರೆಯಾಯಿತು.