ಮೈಸೂರು: ಕಳೆದ ಬಾರಿ ತಡವಾಗಿ ಭರ್ತಿಯಾದ ಹಿನ್ನಲೆಯಲ್ಲಿ ನವೆಂಬರ್ ನಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕಬಿನಿ ಮತ್ತು ಕೆಆರ್ ಎಸ್ ಜಲಾಶಯಕ್ಕೆ ನವೆಂಬರ್ ತಿಂಗಳಲ್ಲಿ ಬಾಗಿನ ಅರ್ಪಿಸಿದ್ದರು. ಆದರೆ ಈ ಬಾರಿ ಜುಲೈನಲ್ಲಿಯೇ ಈ ಎರಡು ಜಲಾಶಯಗಳು ಭರ್ತಿಯಾಗಿರುವುದರಿಂದ ಜು.20ರಂದು ಬಾಗಿನ ಅರ್ಪಿಸುತ್ತಿದ್ದು, ಎರಡನೇ ಬಾರಿಗೆ ಬಾಗಿನ ಅರ್ಪಿಸುವ ಸುಯೋಗ ಒದಗಿ ಬಂದಂತಾಗಿದೆ.
ಕೊಡಗು ಸೇರಿದಂತೆ ಹಾಸನ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆಯಾಗಿದ್ದರಿಂದ ಕೆಆರ್ ಎಸ್ ಜಲಾಶಯ ಹಾಗೂ ವೈನಾಡ್ ವ್ಯಾಪ್ತಿಯಲ್ಲಿ ಮಳೆಯಾಗಿದ್ದರಿಂದ ಕಬಿನಿ ಜಲಾಶಯ ಭರ್ತಿಯಾಗಿದ್ದು ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಸಂಪ್ರದಾಯದಂತೆ ಎರಡು ಜಲಾಶಯಕ್ಕೆ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸುತ್ತಿದ್ದು, ಅದರಂತೆ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯಕ್ಕೆ ಜು.20ರಂದು ಬೆಳಗ್ಗೆ 11ಗಂಟೆ ಮತ್ತು ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರಕ್ಕೆ ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿಗಳು ಬಾಗಿನ ಸಲ್ಲಿಸಲಿದ್ದಾರೆ.
ಅಂದು ಬೆಳಗ್ಗೆ 8.30ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೊರಡಲಿರುವ ಮುಖ್ಯಮಂತ್ರಿಗಳು ಬೆಳಗ್ಗೆ 9.45ಕ್ಕೆ ಚಾಮುಂಡೇಶ್ವರಿ ದರ್ಶನ ಪಡೆಯಲಿದ್ದಾರೆ. 10.40ಕ್ಕೆ ಹೆಲಿಕಾಪ್ಟರ್ ಮೂಲಕ ಬೀಚನಹಳ್ಳಿಗೆ ತೆರಳಿ 11.30ರ ಶುಭಮುಹೂರ್ತದಲ್ಲಿ ಕಬಿನಿಗೆ ಬಾಗಿನ ಅರ್ಪಿಸಲಿದ್ದಾರೆ. ಆ ನಂತರ ಕಬಿನಿ ಜಲಾಶಯ ಹೆಲಿಪ್ಯಾಡ್ನಿಂದ ಹೆಲಿಕಾಪ್ಟರ್ ಮೂಲಕ ಕೆಆರ್ಎಸ್ ಗೆ ತೆರಳಿ 12.10ಕ್ಕೆ ಕಾವೇರಿ ಮಾತೆಗೆ ವಿಶೇಷ ಪೂಜೆ ಮತ್ತು ಕೃಷ್ಣರಾಜ ಸಾಗರ ಜಲಾಶಯಕ್ಕೆ ಬಾಗಿನ ಸಮರ್ಪಿಸಲಿದ್ದಾರೆ.