ಚಾಮರಾಜನಗರ: ಕಡವೆಯನ್ನು ಅಕ್ರಮವಾಗಿ ಬೇಟೆಯಾಡಿ ಬಳಿಕ ಮಾಂಸ ಮಾಡಿ ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ವೇಳೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ವಡಕೆ ಹಳ್ಳ ಸಮೀಪ ನಡೆದಿದೆ.
ಬಸಪ್ಪನದೊಡ್ಡಿ ಗ್ರಾಮದ ಇರ್ಫಾನ್ ಬೇಗ್, ವಹೀದ್, ಅಂಬಿಕಾಪುರದ ಕುಮಾರಸ್ವಾಮಿ, 16 ವರ್ಷದ ಅಪ್ಪು, ಕಾಂಚಳ್ಳಿ ಗ್ರಾಮದ ಯಶ್ವಂತ್, ಕುರುಬರದೊಡ್ಡಿ ಗ್ರಾಮದ ಸೈಯದ್ ಆರೀಸ್ ಬಂಧಿತರು. ಇವರು ಕೋಣನಕೆರೆ ಕಡೆಯಿಂದ ಸರಕು ಸಾಗಾಣಿಕೆ ವಾಹನದಲ್ಲಿ ಅನುಮಾನಸ್ಪದವಾಗಿ ತೆರಳುತ್ತಿದ್ದುದನ್ನು ಗಮನಿಸಿದ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ವಿಚಾರಿಸಿದಾಗ ಕಡವೆ ಬೇಟೆ ಮಾಡಿ ಮಾಂಸ ಸಾಗಾಣಿಕೆ ಮಾಡುತ್ತಿರುವ ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿಗಳನ್ನು ರಾಮಾಪುರ ವಲಯ ಅರಣ್ಯಾಧಿಕಾರಿ ಕಾಂತರಾಜ್ ಎಸ್ ಚವ್ಹಾಣ್ ನೇತೃತ್ವದಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು , ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಕ್ರಮವಾಗಿ ಕಡವೆ ಮಾಂಸ ಸಾಗಾಣಿಕೆ ಮಾಡುತ್ತಿದ್ದ ಕೆಎ.10 ಎ 7334 ವಶಕ್ಕೆ ಪಡೆದುಕೊಂಡು ಹೆಚ್ಚಿನ ತನಿಖೆ ಮುಂದುವರೆಸಲಾಗಿದೆ. ಬಂಧಿತರಿಂದ ಬೇಟೆಗೆ ಬಳಸಿದ ಹಾಗೂ ಕಡವೆ ಕಡಿದ ಸಲಕರಣೆ ಮತ್ತು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.