ಚಾಮರಾಜನಗರ: ಅಕ್ರಮ ಸಾಗಾಟ ಆಗುತ್ತಿದ್ದ ಕೆಜಿಗಟ್ಟಲೆ ತಿಮಿಂಗಲ ವಾಂತಿ (ಅಂಬರ್ ಗ್ರೀಸ್) ವಶಪಡಿಸಿಕೊಂಡಿರುವ ಅರಣ್ಯ ಸಂಚಾರಿ ದಳದ ಪೊಲೀಸರು ನಾಲ್ವರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ಬಸ್ ನಿಲ್ದಾಣ ಸಮೀಪ ನಡೆದಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಅಲ್ಲಮಜ್ಜಿ ರಸ್ತೆಯ ಕೆ.ಬಿ.ವಿರೂಪಾಕ್ಷ (62), ಕೇರಳ ಮೂಲದ ಶಂಸುದ್ಧೀನ್ ಒತಿಯೋತ್ (48), ತ್ರೆಸೀಮಾ ವರ್ಘಸೆ @ ಸುಜಾ (55) ಹಾಗೂ ಸಜಿ ಸುಬಾಸ್ (41) ಬಂಧಿತರು.
ಆರೋಪಿಗಳು ಬೆಂಗಳೂರಿನ ಕಡೆಯ ಕಾಳಸಂತೆಯಲ್ಲಿ ಮಾರಾಟ ಮಾಡುವ ಸಲುವಾಗಿ ಕಾರಿನಲ್ಲಿ ಅಂಬರ್ ಗ್ರಿಸ್ (ತಿಮಿಂಗಿಲ ವಾಂತಿ) ಸಾಗಿಸುತ್ತಿದ್ದರು. ಈ ವಿಷಯ ಖಚಿತಪಡಿಸಿಕೊಂಡ ಅರಣ್ಯ ಸಂಚಾರಿ ದಳದ ಪೊಲೀಸರು ಕೊಳ್ಳೇಗಾಲದ ಬಸ್ ನಿಲ್ದಾಣ ಸಮೀಪ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 14 ಕೆ.ಜಿ 950 ಗ್ರಾಂ ಅಂಬರ್ ಗ್ರಿಸ್ ಹಾಗೂ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.