ಗುಂಡ್ಲುಪೇಟೆ: ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿರುವ ಕಾಡಾನೆಯನ್ನು ರಕ್ಷಿಸಿ ಶುಶ್ರೂಷೆ ಮಾಡಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ತಿಳಿಸಿ, ನಮ್ಮ ಜನರಲ್ಲಿರುವ ಸಹಾನುಭೂತಿಗೆ ಶ್ಲಾಘನೀಯ ಎಂದು ಪ್ರಧಾನಿ ನರೇಂದ್ರಮೋದಿ ಅವರು ಟ್ವೀಟ್ ಮಾಡಿದ್ದಾರೆ.
ಇತ್ತೀಚೆಗೆ ತಾಲೂಕಿನ ಬರಗಿ ಗ್ರಾಮದಲ್ಲಿ ರಾಜು ಎಂಬುವರ ಜಮೀನಿನಲ್ಲಿ ಅಕ್ರಮವಾಗಿ ಹಾಯಿಸಿದ್ದ ವಿದ್ಯುತ್ ಸಂಪರ್ಕಕ್ಕೆ ಕಾಡಾನೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿತ್ತು. ಅದಕ್ಕೆ ಅರಣ್ಯ ಇಲಾಖೆಯ ಪಶುವೈದ್ಯಾಧಿಕಾರಿಗಳ ತಂಡ ಚಿಕಿತ್ಸೆ ನೀಡಿ ಚೇತರಿಸುತ್ತಿದೆ.
ಈ ಬಗ್ಗೆ ಕೇಂದ್ರ ಅರಣ್ಯ ಸಚಿವ ಭೂಪೇಂದರ್ ಯಾದವ್ ಬಂಡಿಪುರ ಹುಲಿ ಸಂರಕ್ಷಿತ ಅರಣ್ಯದ ಸಿಬ್ಬಂದಿಯ ತ್ವರಿತ ಕ್ರಮದಿಂದಾಗಿ ವಿದ್ಯುತ್ ಸ್ಪರ್ಶದಿಂದ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆನೆಯನ್ನು ರಕ್ಷಿಸಲಾಗಿದೆ ಎಂದು ತಿಳಿಸಲು ತುಂಬಾ ಸಂತೋಷವಾಗಿದೆ. ಹೆಣ್ಣು ಆನೆಯನ್ನು ಮತ್ತೆ ಮೀಸಲು ಪ್ರದೇಶಕ್ಕೆ ಬಿಡಲಾಗಿದ್ದು, ತೀವ್ರ ನಿಗಾ ಇರಿಸಲಾಗಿದೆ ಎಂದು ಟ್ವೀಟ್ ಮಾಡಿದ್ದರು.
ಇದನ್ನು ಗಮನಿಸಿದ ಮೋದಿಯರು ಕೂಡ ಆ ಬಗ್ಗೆ ಟ್ವೀಟ್ ಮಾಡಿರುವುದು ಎಲ್ಲರ ಗಮನಸೆಳೆದಿದೆ. ನಮ್ಮ ಅರಣ್ಯ ಮುಂಚೂಣಿ, ಕಾರ್ಯಕರ್ತರು ನಮ್ಮ ಹೆಮ್ಮೆ ಎಂದು ಟ್ವಿಟ್ಟರ್ ನಲ್ಲಿ ಶ್ಲಾಘಿಸಿದ್ದಾರೆ. ಇದೀಗ ಬಂಡೀಪುರ ಅರಣ್ಯ ಸಿಬ್ಬಂದಿಗಳ ಕಾರ್ಯವೈಖರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದ್ದು ಇನ್ನಷ್ಟು ಉತ್ತಮ ಕೆಲಸ ಮಾಡಲು ಉತ್ಸಾಹ ತುಂಬುವಂತೆ ಮಾಡಿದೆ.