ಚಾಮರಾಜನಗರ: ಹನೂರು ಕ್ಷೇತ್ರದ ಶಾಸಕ ಆರ್.ನರೇಂದ್ರ ಅವರು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸಿ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಲೆಂದು ಬಾಳೆಹಣ್ಣಿನಲ್ಲಿ ಬರೆದು ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದ ರಥೋತ್ಸವದಲ್ಲಿ ಅಭಿಮಾನಿಯೊಬ್ಬರು ರಥದ ಮೇಲೆ ಎಸೆದಿರುವುದು ವಿಶೇಷವಾಗಿದೆ.
ಜಿಲ್ಲೆಯ ಮಹದೇಶ್ವರಬೆಟ್ಟದಲ್ಲಿ ಮಹಾ ಶಿವರಾತ್ರಿಯ ಪ್ರಯುಕ್ತ ಮಹಾ ರಥೋತ್ಸವವು ಮಂಗಳವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ರಥೋತ್ಸವಕ್ಕೆ ಸಾಲೂರು ಬೃಹನ್ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು. ಮಂಗಳವಾರ ಬೆಳಿಗ್ಗೆ 8.20ರಿಂದ 9:10 ವರೆಗಿನ ಶುಭ ಲಗ್ನದಲ್ಲಿ ವಿಧಿ ವಿಧಾನಗಳೊಂದಿಗೆ ಸಂಪ್ರದಾಯದಂತೆ ಮಹಾರಥೋತ್ಸವ ಜರುಗಿತು. ಇದಕ್ಕೂ ಮುನ್ನ ದೇವಸ್ಥಾನದಲ್ಲಿ ಮಾದಪ್ಪನಿಗೆ ವಿಶೇಷ ಪೂಜೆ ನೆರವೇರಿತು. ಸಾಲೂರು ಬೃಹನ್ ಮಠ ಅಧ್ಯಕ್ಷ ಶ್ರೀ ಶಾಂತ ಮಲ್ಲಿ ಕಾರ್ಜುನ ಸ್ವಾಮೀಜಿ ಹಾಗೂ ಬೇಡಗಂಪಣ ಅರ್ಚಕರು ಪೂಜೆ ನೆರವೇರಿಸಿ ಪ್ರದಕ್ಷಿಣೆ ಹಾಕಿದರು.
ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ ಸುರಪಾನಿ, ಛತ್ರಿ, ಚಾಮರ ನಂದಿ ಧ್ವಜ ಕಂಬ ಹಾಗೂ ಮಂಗಳವಾದ್ಯದೊಂದಿಗೆ ದೇಗುಲದ ಸುತ್ತ ಪ್ರದಕ್ಷಣೆ ಹಾಕಲಾಯಿತು. ಈ ವೇಳೆ ಮಾದಪ್ಪನ ಭಕ್ತರು ಉಘೇ ಮಾದಪ್ಪ, ಉಘೇ ಮಾಯ್ಕಾರ ಮಾದೇಶ್ವರ ಎಂಬ ಘೋಷಣೆಗಳನ್ನು ಕೂಗಿದರು. ಹರಕೆ ಹೊತ್ತ ಭಕ್ತರು ಹಣ್ಣು ಧವನ, ನಗ ನಾಣ್ಯ, ದವಸ ಧಾನ್ಯ ಎಸೆದು ತಮ್ಮ ಹರಕೆ ತೀರಿಸಿದರೆ, ಶಾಸಕ ಆರ್.ನರೇಂದ್ರ ಅವರ ಅಭಿಮಾನಿಯೊಬ್ಬರು ಬಾಳೆಹಣ್ಣಿನಲ್ಲಿ ನರೇಂದ್ರ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಲೆಂದು ಬರೆದು ರಥೋತ್ಸವದಲ್ಲಿ ಎಸೆದಿದ್ದು ಗಮನಸೆಳೆದಿದೆ.