ಚಾಮರಾಜನಗರ: ವರ್ಷಗಳ ಕಾಲ ಪ್ರೀತಿಸಿ, ಎಲ್ಲೆಂದರಲ್ಲಿ ಸುತ್ತಾಡಿದ್ದಲ್ಲದೇ ಮದುವೆಯಾಗುವುದಾಗಿ ನಂಬಿಸಿ ನಿರಂತರ ದೈಹಿಕ ಸಂಪರ್ಕ ಬೆಳೆಸಿ, ಇದೀಗ ಮದುವೆ ಮಾಡಿಕೊಳ್ಳುವಂತೆ ಹೇಳಿದಾಗ ನಾಪತ್ತೆಯಾಗಿರುವುದಾಗಿ ಪೊಲೀಸ್ ಪೇದೆ ವಿರುದ್ಧ ವಿವಾಹಿತ ಮಹಿಳೆ ದೂರು ನೀಡಿರುವ ಘಟನೆ ಯಳಂದೂರು ತಾಲೂಕಿನ ಗುಂಬಳ್ಳಿ ಗ್ರಾಮದಲ್ಲಿ ನಡೆದಿದೆ.
ಚಾಮರಾಜನಗರ ಪಟ್ಟಣ ಠಾಣೆ ಪೊಲೀಸ್ ಪೇದೆ ಶಂಕರ್ ಎಂಬವರ ವಿರುದ್ಧ ಯಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 27 ವರ್ಷದ ವಿವಾಹಿತೆ ದೂರು ನೀಡಿ ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿ, ಮದುವೆ ಆಗು ಎಂದಿದ್ದಕ್ಕೆ ಕೊಲೆ ಬೆದರಿಕೆ ಹಾಕಿದ್ದಾರೆ. ನನಗೆ ನ್ಯಾಯ ಕೊಡಿಸಿ ಎಂದು ದೂರು ನೀಡಿದ್ದಾರೆ.
ವಿವಾಹಿತೆಗೆ ಈಗಾಗಲೇ ಎರಡು ಮಕ್ಕಳಿದ್ದು, ಕೌಟಂಬಿಕ ಕಲಹದಿಂದಾಗಿ ತವರು ಮನೆಗೆ ವಾಪಸಾಗಿದ್ದಾರೆ. ಈ ವೇಳೆ ಪೇದೆ ಶಂಕರ್ ಹಳೇ ಪರಿಚಯದಿಂದ ಮಾತುಕತೆ ಆಡುತ್ತ ಪ್ರೇಮದ ಬಲೆಗೆ ಬೀಳಿಸಿಕೊಂಡಿದ್ದರಂತೆ. ಬಳಿಕ ಕಳೆದ ಒಂದು ವರ್ಷದಿಂದ ಮಹಿಳೆಯ ಮೇಲೆ ಶಂಕರ್ ನಿರಂತರ ಅತ್ಯಾಚಾರ ಎಸಗಿದ್ದಾರಂತೆ. ಬಳಿಕ ವಿವಾಹಿತೆ ಮದುವೆ ಆಗು ಎಂದಿದ್ದಕ್ಕೆ ಪೇದೆ ನಿರಾಕರಿಸಿದ್ದಾರೆ.
ಈ ಸಂಬಂಧ ಹಿರಿಯರ ಸಮ್ಮುಖದಲ್ಲಿ ಮಾತುಕತೆಯೂ ನಡೆದಿದ್ದು, ಮದುವೆಗೆ ಪೇದೆ ಒಪ್ಪಿಲ್ಲ ಎಂದು ತಿಳಿದುಬಂದಿದೆ. ಕೊನೆಗೆ, ನ್ಯಾಯಕ್ಕಾಗಿ ವಿವಾಹಿತೆ ಯಳಂದೂರು ಠಾಣೆಗೆ ದೂರು ಕೊಟ್ಟಿದ್ದರಿಂದ ಅತ್ಯಾಚಾರ ಮತ್ತು ಕೊಲೆ ಬೆದರಿಕೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಶಂಕರ್ ಪರಾರಿಯಾಗಿದ್ದಾರೆ. ಯಳಂದೂರು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.