ರಾಜಸ್ತಾನ: ನೂಪುರ್ ಶರ್ಮಾ ಪರವಾಗಿ ಪೋಸ್ಟ್ ಹಾಕಿದ್ದ ವ್ಯಕ್ತಿಯ ಶಿರಚ್ಚೇದ ಮಾಡಿ, ಪ್ರಧಾನಿಗೆ ಜೀವ ಬೆದರಿಕೆ ಹಾಕಿದ ಘಟನೆ ದೇಶವನ್ನೇ ನಡುಗಿಸಿದ್ದು, ರಾಜಸ್ಥಾನದಲ್ಲಿ ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಇದೀಗ ಒಂದು ತಿಂಗಳವರೆಗೂ 144 ಸೆಕ್ಷನ್ ಜಾರಿ ಮಾಡಲಾಗಿದ್ದು, ರಾಷ್ಟ್ರೀಯ ತನಿಖಾ ದಳ(ಎನ್ಐಎ) ಅಖಾಡಕ್ಕಿಳಿದಿದೆ.
ಎನ್ಐಎ ತಂಡ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಉದಯಪುರಕ್ಕೆ ಆಗಮಿಸಿದೆ. ತಕ್ಷಣ ಶಾಂತಿ ನೆಲೆಸಲು ಮತ್ತು ಘಟನೆಯನ್ನು ತೀವ್ರ ತನಿಖೆ ನಡೆಸಲು ಗೃಹ ಸಚಿವಾಲಯ ಸೂಚನೆಯ ಮೇರೆಗೆ ಎನ್ಐಎ ರಾಜ್ಯಕ್ಕೆ ಆಗಮಿಸಿದೆ.
ಬೆಂಗಳೂರಿನಲ್ಲೂ ಹೈ ಅಲರ್ಟ್:
ನೂಪುರ್ ಶರ್ಮಾ ಬೆಂಬಲಿಸಿದ ರಾಜಸ್ಥಾನದ ಉದಯ್ಪುರನ ಕನ್ಹಯ್ಯ ಕುಮಾರ್ನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಘಟನೆ ಖಂಡಿಸಿ ಉದಯ್ಪುರದಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದೆ. ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ಪೊಲೀಸ್ ಕಮಿಷನರ್ ನಗರದ ಎಲ್ಲಾ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ. ಘಟನೆ ಖಂಡಿಸಿ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಹೀಗಾಗಿ ನಗರದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲು ಸೂಚಿಸಲಾಗಿದೆ.ಬೀಟ್ ಪೊಲೀಸರು ಅಲರ್ಟ್ ಆಗಿರಲು ಸೂಚಿಸಲಾಗಿದೆ.