ಹನೂರು: ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ಮುಖಂಡರ ನಡುವೆ ಭಿನ್ನಮತ ಸ್ಪೋಟಗೊಂಡು ಕೆಲವರ ಮಧ್ಯೆ ಮಾರಾಮಾರಿ ನಡೆದು ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡ ಘಟನೆ ಭಾನುವಾರದಂದು ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಲೋಕೋಪಯೋಗಿ ಇಲಾಖೆಯ ವಸತಿಗೃಹದ ಸಭಾಂಗಣದಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ನಿಮಿತ್ತ ಬಿಜೆಪಿ ವತಿಯಿಂದ ಸಭೆಯನ್ನು ಏರ್ಪಡಿಸಲಾಗಿತ್ತು. ಬಿಜೆಪಿ ಹನೂರು ಮಂಡಲ ಮಾಜಿ ಅಧ್ಯಕ್ಷ ಜಗನ್ನಾಥ್ ನಾಯ್ಡು ಮಾತನಾಡಿ ತಾಲೂಕಿನಿಂದ ಡಾ. ದತ್ತೇಶ್ ಕುಮಾರ್ ಬಣದ ಮೂವರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳನ್ನಾಗಿ ಮಾಡಿರುವುದು ಸರಿಯಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ನೂತನವಾಗಿ ರಚನೆ ಮಾಡಿರುವ ಪದಾಧಿಕಾರಿಗಳ ಪಟ್ಟಿಯಲ್ಲಿ ನೇಮಕ ಮಾಡಿರುವ ನಾಲ್ವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಡಾ. ದತ್ತೇಶ್ ಕುಮಾರ್ ಬಣದ ನಾಗರಾಜು, ಅಶ್ವಥ್ ರವರನ್ನೇ ಪ್ರಧಾನ ಕಾರ್ಯದರ್ಶಿಗಳಾಗಿ ಮಾಡಿದ್ದಾರೆ. ತಾಲೂಕಿನಲ್ಲಿ ಬೇರೆಯವರು ಯಾರು ಇರಲಿಲ್ಲವಾ, ನಾನು ಸಹ ಮೊಟ್ಟಮೊದಲ ಬಾರಿಗೆ ಹನೂರು ಮಂಡಲ ಅಧ್ಯಕ್ಷನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ, ನಮ್ಮಂತಹ ಹಿರಿಯರಿಗೆ ಪಕ್ಷದಲ್ಲಿ ಗೌರವವಿಲ್ಲ, ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಗೂ ಅವರ ಪುತ್ರ ಪ್ರೀತಂ ನಾಗಪ್ಪ ರವರು ಸೋಲಲು ಡಾ. ದತ್ತೇಶ್ ಕುಮಾರ್ ರವರೆ ಕಾರಣ ಎಂದು ಹೇಳುತ್ತಿದ್ದಂತೆ ಕೆಲ ಮುಖಂಡರ ನಡುವೆ ಮಾತಿನ ಚಕಮಕಿ ಪ್ರಾರಂಭವಾಗಿ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಈ ವೇಳೆ ಪಕ್ಷದ ಮುಖಂಡರುಗಳು ಕಾರ್ಯಕರ್ತರನ್ನು ಸಮಾಧಾನಪಡಿಸಿದರು. ಅಲ್ಲದೆ ಸಭೆಯಲ್ಲಿ ಕೆಲವರು ನೀರಿನ ಬಾಟಲ್ ಎಸೆದು ಆಕ್ರೋಶ ಹೊರಹಾಕಿದರು.
ನಂತರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಬೂದಬಾಳು ವೆಂಕಟಸ್ವಾಮಿ ಮಾತನಾಡಿ ನಾವು ಮುಂದಿನ ಚುನಾವಣೆಗೆ ಗಮನ ನೀಡಿ ಪಕ್ಷ ಬಲವರ್ಧನೆ ಮಾಡಬೇಕಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಮೂರನೇ ಬಾರಿಗೆ ಪ್ರಧಾನಮಂತ್ರಿಯನ್ನಾಗಿ ಮಾಡಲು ಪಣತೊಡಬೇಕು. ಪಕ್ಷದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಇರುತ್ತದೆ ಅದನ್ನೆಲ್ಲ ಪಕ್ಷದ ಸಭೆಗಳಲ್ಲಿಯೇ ಬಗೆಹರಿಸಿಕೊಳ್ಳಬೇಕು. ಇದನ್ನೇ ದೊಡ್ಡದು ಮಾಡಿಕೊಳ್ಳುವುದನ್ನು ಬಿಡಬೇಕು. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದರು.
ಬಳಿಕ ಚುನಾವಣಾ ಉಸ್ತುವಾರಿ ಡಾ. ಬಾಬು ಮಾತನಾಡಿ ಇಡೀ ದೇಶಾದ್ಯಂತ ಮೋದಿ ರವರ ಜನಪರ ಅಭಿವೃದ್ಧಿ ಕಾರ್ಯಕ್ರಮಗಳು ಪ್ರತಿಯೊಬ್ಬರ ಮನೆಮನೆಗೂ ತಲುಪಿದೆ. ನಮ್ಮ ಬಿಜೆಪಿ ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಹಿಂದುಳಿದ ಮೋರ್ಚಾ ಅಧ್ಯಕ್ಷ ವೆಂಕಟೇಶ್, ಮಹದೇಶ್ವರ ಮಂಡಲ ಅದ್ಯಕ್ಷ ಚಂಗವಾಡಿ ರಾಜು, ಹನೂರು ಮಂಡಲ ಅದ್ಯಕ್ಷ ವೃಷಭೇಂದ್ರ ಸೇರಿದಂತೆ ಬಿಜೆಪಿ ಮುಖಂಡರಾದ ನಿಶಾಂತ್, ದತ್ತೇಶ್ ಕುಮಾರ್, ಪಾಳ್ಯ ಜೈಸುಂದರ್, ವೆಂಕಟೇಗೌಡ, ಬಿ.ಕೆ.ಶಿವಕುಮಾರ್ ಹುತ್ತೂರು ನಾಗರಾಜು, ಧನಗೆರೆ ಮಹೇಶ್, ಸರಗೂರು ಶಿವು ಹಾಗೂ ಇನ್ನಿತರರು ಹಾಜರಿದ್ದರು.