ಚಾಮರಾಜನಗರ: ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ ಪ್ರಚೋದನೆ, ಹಿಂಸೆ, ಜನರನ್ನು ಭಾವನಾತ್ಮಕವಾಗಿ ಕೆರಳಿಸುವುದು ಬಿಜೆಪಿಯ ಕಾರ್ಯಸೂಚಿಯಾಗಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಮೇಳವನ್ನು ಉದ್ಘಾಟಿಸುವ ಮುನ್ನ ಪ್ರವಾಸಿ ಮಂದಿರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಬಿಜೆಪಿಯವರು ಪ್ರತಿಯೊಂದು ವಿಚಾರದಲ್ಲೂ ಧರ್ಮದ ಆಧಾರದಲ್ಲಿ ಜನರನ್ನು ಪ್ರಚೋದನೆ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದ ಕೆರೆಗೋಡಿನ ಕೇಸರಿ ಧ್ವಜ ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಚಿವರು ಅಲ್ಲಿ ಅನುಮತಿ ಪಡೆದಿರುವ ಉದ್ದೇಶವೇ ಬೇರೆ. ಈಗ ಆಗುತ್ತಿರುವುದೇ ಬೇರೆ. ಧರ್ಮದ ವಿಚಾರ ಪ್ರಸ್ತಾಪಿಸಿ ದೇಶದ್ರೋಹಿ, ಧರ್ಮವಿರೋಧಿ, ಪಾಕಿಸ್ತಾನಕ್ಕೆ ಹೋಗಿ ಎಂದೆಲ್ಲ ಹೇಳಿಕೊಂಡು ಜನರನ್ನು ಕೆರಳಿಸುತ್ತಾ ಬಿಜೆಪಿ ಬಂದಿದೆ. ಮೊದಲಿನಿಂದಲೂ ಬಿಜೆಪಿ ಕೀಳುಮಟ್ಟದ ರಾಜಕಾರಣ ಮಾಡಿಕೊಂಡು ಬರುತ್ತಿದೆ ಎಂದರು.
ಬಿಜೆಪಿಯವರು ಅಧಿಕಾರದಲ್ಲಿದ್ದಾಗಲೂ ಇದನ್ನೇ ಮಾಡಿದ್ದಾರೆ. ಅಭಿವೃದ್ಧಿ ಮಾಡಲಿಲ್ಲ. ಭ್ರಷ್ಟಾಚಾರದಲ್ಲಿ ತೊಡಗಿದ್ದರು. ಹಿಜಾಬ್, ಕೇಸರಿ ಶಾಲು, ಟಿಪ್ಪು ಸುಲ್ತಾನ್ ವಿಚಾರಗಳನ್ನು ಹೇಳುತ್ತಾ ರಾಜಕಾರಣ ಮಾಡುತ್ತಾ ಬಂದಿದ್ದರು. ಜನರ ಭಾವನೆಗಳ ಮೇಲೆ ಮತ ತೆಗೆದುಕೊಳ್ಳಬೇಕು ಎಂಬುದು ಅವರ ಉದ್ದೇಶ. ಜನರು ಎಚ್ಚೆತ್ತುಕೊಳ್ಳಬೇಕು. ಇದನ್ನು ರಾಜ್ಯದ ಜನರು ಅರ್ಥಮಾಡಿಕೊಳ್ಳಬೇಕು.ಎಂದರು.
ಉದ್ದೇಶಪೂರ್ವಕವಾಗಿ ಘಟನೆಗಳನ್ನು ಸೃಷ್ಟಿ ಮಾಡಿ, ಹಿಂದೂ ವಿರೋಧಿ ಎಂದು ಬಿಂಬಿಸುತ್ತಾರೆ. ನಾವೇನೂ ಹಿಂದೂ ವಿರೋಧಿಗಳಾ? ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ. ಎಲ್ಲರನ್ನೂ ಪ್ರೀತಿಸಬೇಕು ಎಂದು ಬಸವಣ್ಣನವರ ತತ್ವ ಹೇಳುತ್ತದೆ. ಒಳ್ಳೆಯ ವಿಚಾರಗಳನ್ನು ಮಾತನಾಡಬೇಕು. ಅದು ಬಿಟ್ಟು ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದರು.