ಚಾಮರಾಜನಗರ: ರಾಜ್ಯದ ಪ್ರಮುಖ ಪ್ರವಾಸಿ ತಾಣ ಮತ್ತು ಅತೀ ಹೆಚ್ಚು ಹುಲಿಗಳನ್ನು ಹೊಂದಿರುವ ಖ್ಯಾತಿ ಪಡೆದಿರುವ ಜಿಲ್ಲೆಯ ಬಂಡೀಪುರ ತನ್ನದೇ ನಿಸರ್ಗ ಸಿರಿಯಿಂದ ಎಲ್ಲರ ಗಮನಸೆಳೆದಿದೆ. ಇಂತಹ ಬಂಡೀಪುರದ ಅಭಯಾರಣ್ಯದಲ್ಲಿ ಪ್ರಮುಖ ಮೂರು ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಕ ಮಾಡದೆ ಉಳಿಸಿರುವುದು ಬೇಸರದ ಸಂಗತಿಯಾಗಿದೆ.
ಬೇಸಿಗೆ ಬರುತ್ತಿರುವುದರಿಂದ ಅರಣ್ಯವನ್ನು ಹದ್ದಿನ ಕಣ್ಣಿಟ್ಟು ಕಾಯಬೇಕಾಗಿದೆ. ಹೀಗಿರುವಾಗ ಪ್ರಮುಖ ಅಧಿಕಾರಿಗಳಿಲ್ಲದೆ ಹೋದರೆ ಹೇಗೆ ಎಂಬ ಆತಂಕವೂ ಶುರುವಾಗಿದೆ. ಸದ್ಯ ಬಂಡೀಪುರದಲ್ಲಿ ಹುಲಿ ಯೋಜನೆಯ ನಿರ್ದೇಶಕ ಸ್ಥಾನ, ಸಹಾಯಕ ಅರಣ್ಯಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳ ಹುದ್ದೆ ಖಾಲಿ ಇದ್ದು ಸರ್ಕಾರ ಹುದ್ದೆಗೆ ಯಾರನ್ನು ಇನ್ನೂ ನೇಮಿಸಿ ಆದೇಶಿಸಿಲ್ಲ ಇದರಿಂದಾಗಿ ಬಂಡೀಪುರದಲ್ಲಿ ಹೇಳಿ ಕೊಳ್ಳುವಷ್ಟು ಅಭಿವೃದ್ದಿ ಕೆಲಸವಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ನಿಷ್ಠಾವಂತ ಅಧಿಕಾರಿಗಳನ್ನು ನೇಮಿಸುವ ಬದಲಿಗೆ ಕೇವಲ ನಿಯೋಜನೆ ಮೇರೆಗೆ ಸೇವೆ ಸಲ್ಲಿಸಿದವರೇ ಹೆಚ್ಚಾಗಿದೆ ಇದರಿಂದಾಗಿ ಬಂಡೀಪುರ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮತ್ತು ಕಾಡಂಚಿನ ಗ್ರಾಮಗಳ ನಿವಾಸಿಗಳ ಮನಸ್ತಾಪದಿಂದಾಗಿ ಬೆಂಕಿ ಅವಘಡಗಳು ಸಂಭವಿಸಿ ಅಸಂಖ್ಯಾತ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಇದಕ್ಕೆ 2019 ರಲ್ಲಿ ನಡೆದ ಬೆಂಕಿ ಅವಘಡ ಸಾಕ್ಷಿಯಾಗಿದೆ.
ಇನ್ನು ಖಾಯಂ ಮೇಲಾಧಿಕಾರಿಗಳಿಲ್ಲದೆ ಬಳಲುತ್ತಿರುವ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯದ ಆರ್ ಎಫ್ ಓ ಗಳು ಉಸ್ತುವಾರಿ ಅಧಿಕಾರಿಗಳ ಮಾರ್ಗದರ್ಶನದಲ್ಲೇ ಬೇಸಿಗೆಗೂ ಮುನ್ನಾ ಕಾಡಿನಲ್ಲಿ ಬೆಂಕಿ ನಿಯಂತ್ರಣ ರೇಖೆ ನಿರ್ಮಾಣ ಮಾಡುತ್ತಿದ್ದಾರೆ. ಬೇಸಿಗೆ ಬಂತೆಂದರೆ ಸಾಕು ಮರ ಗಿಡಗಳು ಒಣಗಿ ಹೋಗಿ ಯಾವಾಗ ಬೇಕಾದರೂ ಅಗ್ನಿ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಜತೆಗೆ ಕಾಡುಕಳ್ಳರ ಕಾಟವೂ ಇಲ್ಲದಿಲ್ಲ.
ಬೇಸಿಗೆಯಲ್ಲಿ ಅರಣ್ಯದಿಂದ ನಾಡಿನತ್ತ ಬರುವ ವನ್ಯಪ್ರಾಣಿಗಳತ್ತಲೂ ಗಮನಹರಿಸಿ ಕ್ರಮಕೈಗೊಳ್ಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪ್ರಮುಖ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ ಪ್ರಮುಖ ಅಧಿಕಾರಿಗಳು ಇಲ್ಲದಿದ್ದರೆ ಸಮಸ್ಯೆಗಳು ಎದುರಾಗಲಿವೆ.
ಇದೀಗ ಬಂಡೀಪುರದ ಆಯಾ ವಲಯದ ಆರ್ ಎಫ್ ಓ ಗಳು ನೌಕರರ ಕೊರತೆಯ ನಡುವೆ ದಿನಗೂಲಿ ನೌಕರರ ಸಹಕಾರದೊಂದಿಗೆ ಫೈರ್ ಲೈನ್ ನಿರ್ಮಿಸುತ್ತಿದ್ದಾರೆ.
ಇನ್ನಾದರೂ ಸರ್ಕಾರ ಇತ್ತ ಗಮನಹರಿಸಿ ಖಾಲಿಯಿರುವ ಹುದ್ದೆಗೆ ಅಧಿಕಾರಿಗಳನ್ನು ನೇಮಕ ಮಾಡಿ ಬಂಡೀಪುರ ಉದ್ಯಾನದತ್ತ ಗಮನಹರಿಸುವ ಕೆಲಸವನ್ನು ಮಾಡಬೇಕಾಗಿದೆ.