ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಕೇಂದ್ರ ಬಜೆಟ್ ೨೦೨೨’ ವಿಶ್ಲೇಷಣಾ ಕಾರ್ಯಕ್ರಮ
ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಪದವಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ‘ಕೇಂದ್ರ ಬಜೆಟ್ ೨೦೨೨’ರ ಕುರಿತಾದ ವಿಶ್ಲೇಷಣಾ ಕಾರ್ಯಕ್ರಮ ಶನಿವಾರ ನಡೆಯಿತು.
ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಅರ್ಥಶಾಸ್ತç ಉಪನ್ಯಾಸಕಿ ವಿದ್ಯಾ ಸರಸ್ವತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೇಂದ್ರ ಬಜೆಟ್ನಲ್ಲಿ ಮೂಲಭೂತ ಸೌಕರ್ಯಗಳಿಗೆ ಪ್ರಸ್ತುತ ಬಾರಿ ಹೆಚ್ಚಿನ ಆದ್ಯತೆ ಕೊಟ್ಟಿರುವುದನ್ನು ಗಮನಿಸಬಹುದು. ಹಾಗೆಯೇ ಸ್ವಾವಲಂಬಿ ಜೀವನವನ್ನು ಸಾಗಿಸುವುದಕ್ಕೆ ಪೂರಕವಾದ ಉತ್ತೇಜನಗಳನ್ನು ಈ ಬಾರಿಯ ಬಜೆಟ್ ಒಳಗೊಂಡಿರುವುದು ಗಮನಾರ್ಹ. ಪಂಚನದಿಗಳ ಜೋಡಣೆ ಪ್ರಸ್ತುತ ಬಜೆಟ್ನಲ್ಲಿ ಅಡಕವಾಗಿರುವ ಮುಖ್ಯವಾದ ಯೋಜನೆಗಳಲ್ಲೊಂದು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಡಾ.ವಿನಾಯಕ ಭಟ್ಟ ಗಾಳಿಮನೆ ಮಾತನಾಡಿ ಬಜೆಟ್ ವಿಶ್ಲೇಷಣೆ ಎನ್ನುವುದು ಅತ್ಯಂತ ಅಗತ್ಯವಾದ ವಿಚಾರ. ವಿಷಯವೊಂದನ್ನು ವಿಶ್ಲೇಷಣೆಗೈದಾಗಲಷ್ಟೇ ಅದರೊಳಗಿನ ಹೂರಣವನ್ನು ಅರ್ಥ ಮಾಡಿಕೊಳ್ಳಬಹುದು. ವಿಷಯಾಧಾರಿತ ಚರ್ಚೆಗೆ ವಿದ್ಯಾರ್ಥಿಗಳು ತಮ್ಮನ್ನು ತಾವು ಒಡ್ಡಿಕೊಳ್ಳಬೇಕು. ಪ್ರತಿಯೊಬ್ಬರಿಗೂ ಬಜೆಟ್ ಬಗೆಗಿನ ಜ್ಞಾನ ದೊರಕಬೇಕು ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಸರ್ಕಾರವೊಂದು ಬಜೆಟ್ ಮಂಡಿಸಿದಾಗ ಆ ಬಜೆಟ್ ನಲ್ಲಿ ಇರುವ ದೋಷಗಳನ್ನು ಯುವಸಮೂಹ ಗುರುತಿಸಿ ಸರ್ಕಾರದ ಗಮನಕ್ಕೆ ತರಬೇಕು. ಇಂತಹ ಸಾಮಾಜಿಕ ಭಾಗವಹಿಸುವಿಕೆ ಸರ್ಕಾರ ತನ್ನ ತಪ್ಪುಗಳನ್ನು ತಿದ್ದಿಕೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳಾದ ಅನ್ಮಯ್ ಭಟ್ ಹಾಗೂ ಮಹಿಮಾ ಹೆಗಡೆ ಬಜೆಟ್ನಲ್ಲಿ ಉಕ್ತವಾದ ಮುಖ್ಯಾಂಶಗಳನ್ನು ಮಂಡಿಸಿದರು. ವಿದ್ಯಾರ್ಥಿನಿಯರಾದ ಸ್ವಾತಿ ಮತ್ತು ಸಿಂಚನ ಪ್ರಾರ್ಥಿಸಿದರು. ವಿದ್ಯಾರ್ಥಿನಿ ತೇಜಸ್ವಿನಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅನನ್ಯಾ ವಿ ವಂದಿಸಿದರು. ವಿದ್ಯಾರ್ಥಿನಿ ಸ್ವರ್ಣ ಕಾರ್ಯಕ್ರಮ ನಿರ್ವಹಿಸಿದರು.