ಪಿರಿಯಾಪಟ್ಟಣ: ರಾಜಕೀಯದಲ್ಲಿ ಧರ್ಮವಿರಲಿ ಆದರೆ ಧರ್ಮಕ್ಕೆ ರಾಜಕೀಯ ಬೆರೆಸಬೇಡಿ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಕಿವಿಮಾತು ಹೇಳಿದ್ದಾರೆ.
ತಾಲೂಕಿನ ಅತ್ತಿಗೋಡು ಗ್ರಾಮದಲ್ಲಿ ವೀರಶೈವ ಲಿಂಗಾಯತ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಈಶ್ವರ ದೇವಸ್ಥಾನದ ಉದ್ಘಾಟನೆ ಪ್ರಯುಕ್ತ ನಡೆದ ಶ್ರೀಗಳ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ ಮಾತನಾಡಿದ ಅವರು, ತಂತ್ರಜ್ಞಾನ ಬೆಳೆದಂತೆ ಧರ್ಮವನ್ನು ಯುವಜನತೆ ಮರೆಯುತ್ತಿರುವುದು ವಿಷಾದಕರ. ಯಾವುದೇ ಮಠಗಳು ಧರ್ಮದ ಬೋಧನೆ ಮಾಡಬೇಕೆ ಹೊರತು ರಾಜಕೀಯ ಪ್ರಚಾರವನ್ನಲ್ಲ. ಮನುಷ್ಯನಾಗಿ ಹುಟ್ಟಿದ ಮೇಲೆ ದೇವರು ಧರ್ಮ ಗುರುವನ್ನು ಮರೆಯಬಾರದು. ಮನುಷ್ಯ ಯಾವಾಗಲೂ ಸುಖಾಪೇಕ್ಷಿ. ಆದರೆ ಸುಖದ ಮೂಲ ಧರ್ಮಾಚರಣೆಯಲ್ಲಿದೆ. ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆದು ಯಶಸ್ಸು ಗಳಿಸಬೇಕಾದರೆ ಧರ್ಮದ ಆಚಾರ ವಿಚಾರ ಪಾಲನೆ ಬಹುಮುಖ್ಯ ಎಂದರು.
ಸುಸಂಸ್ಕೃತ ಸದೃಢ ಸಮಾಜ ಕಟ್ಟಿ ಬೆಳೆಸಲು ಸತ್ಯ ಸಂಸ್ಕೃತಿ ಶ್ರದ್ಧೆಯನ್ನು ಸಮುದಾಯದಲ್ಲಿ ಬೆಳೆಸಬೇಕಾಗಿದೆ. ವೈಚಾರಿಕತೆ ಮತ್ತು ಸುಧಾರಣೆಯ ಹೆಸರಿನಲ್ಲಿ ಆದರ್ಶ ಚಿಂತನಗಳನ್ನು ಮತ್ತು ಧಾರ್ಮಿಕ ಮೌಲ್ಯಗಳನ್ನು ಮರೆಯಬಾರದು. ಮರೆಯುವುದು ಮನುಷ್ಯನ ಸ್ವಭಾವವಾದರೆ ಮರೆತುದನ್ನು ನೆನಪು ಮಾಡಿಕೊಡುವುದು ಗುರುವಿನ ಧರ್ಮ. ಜಗದ ಕತ್ತಲೆ ಕಳೆಯಲು ಸೂರ್ಯ ಬೇಕು. ಆದರೆ, ಬದುಕಿನ ಅಜ್ಞಾನ ಕಳೆಯಲು ಗುರು ಬೋಧಾಮೃತ ಅವಶ್ಯಕ. ದೇವರು ಕೊಟ್ಟ ಕೊಡುಗೆಗೆ ಬೆಲೆ ಕಟ್ಟಲಾಗದು ಭಗವಂತನ ಪೂಜೆ ಮತ್ತು ಧ್ಯಾನದಿಂದ ಕೃತಜ್ಞತೆ ಸಲ್ಲಿಸುವುದೊಂದೇ ದಾರಿ. ಧರ್ಮವೆಂದರೆ ಆಚರಣೆಯೇ ವಿನಹ ಮಾತನಾಡುವುದಲ್ಲ. ಹಸಿದವನಿಗೆ ಅನ್ನ ಬಾಯಾರಿದವನಿಗೆ ನೀರು ನೀಡುವುದೇ ಧರ್ಮದ ಆಚರಣೆ. ಧರ್ಮದ ದಾರಿ ತಪ್ಪಿ ನಡೆದರೆ ಆತಂಕ ತಪ್ಪಿದ್ದಲ್ಲ ಎಂದರು.
ಈ ಸಂದರ್ಭ ಬೆಟ್ಟದಪುರ ಕನ್ನಡಮಠದ ಚಿಕ್ಕವೀರ ದೇಶಿಕೇಂದ್ರ ಸ್ವಾಮೀಜಿ, ಹರಳಹಳ್ಳಿ ಗುರುಮಠದ ಶ್ರೀಕಂಠಾರಾಧ್ಯ ಶಾಸ್ತ್ರಿ, ಮಾಜಿ ಶಾಸಕ ಎಚ್.ಸಿ.ಬಸವರಾಜು, ಕೆಡಬ್ಲ್ಯುಎಸ್ಎಸ್ಬಿ ನಾಮನಿರ್ದೇಶಕ ಸದಸ್ಯ ಆರ್.ಟಿ.ಸತೀಶ್, ಮೈಮುಲ್ ನಿರ್ದೇಶಕ ಎಚ್.ಡಿ.ರಾಜೇಂದ್ರ ಸೇರಿದಂತೆ ಹಲವರು ಇದ್ದರು.