ಚಾಮರಾಜನಗರ : ಅಕ್ರಮವಾಗಿ ಶ್ರೀಗಂಧವನ್ನು ಸಂಗ್ರಹಿಸಿ ಮಾರಾಟ ಮಾಡಲಾಗುತ್ತಿದ್ದ ಮನೆಯ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 35 ಕೆಜಿ ಶ್ರೀಗಂದದ ತುಂಡು ಹಾಗೂ ಕುಡುಗೋಲು ಬಂದೂಕು ವಶ ಪಡಿಸಿಕೊಂಡಿರುವ ಘಟನೆ ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಈರೋಡ್ ಜಿಲ್ಲೆಯ ಸತ್ಯಮಂಗಲಂ ಬಳಿಯ ತಾಳವಾಡಿ ಬಳಿ ನಡೆದಿದೆ.
ತಾಳವಾಡಿಯ ಸಬೀವುಲ್ಲಾ ಮತ್ತು ಖಾಸಿಂ ಷರೀಫ್ ಅವರ ಮನೆಯಲ್ಲಿ ಅಕ್ರಮವಾಗಿ ಶ್ರೀಗಂಧ ತುಂಡುಗಳನ್ನು ಶೇಖರಣೆ ಮಾಡಲಾಗಿದೆ ಎಂದು ಹಾಸನೂರು ಜಿಲ್ಲಾ ಅರಣ್ಯಾಧಿಕಾರಿ ದೇವೇಂದ್ರ ಕುಮಾರ್ ಮೀನಾ ಅವರಿಗೆ ಬಂದ ಮಾಹಿತಿ ಮೇರೆಗೆ ತಾಳವಾಡಿ ಅರಣ್ಯಾಧಿಕಾರಿ ಸತೀಶ್, ಅಸನ್ಸೋಲ್ ಅರಣ್ಯ ಸಂರಕ್ಷಣಾ ದಳದ ರೇಂಜರ್ ಅಮುಲ್ರಾಜ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದಾಗ 35 ಕೆ.ಜಿ ತೂಕದ ಶ್ರೀಗಂಧದ ತುಂಡುಗಳು, ನಾಡ ಬಂದೂಕು, ತೂಕದ ಯಂತ್ರ ಪತ್ತೆಯಾಗಿದ್ದು ಅದನ್ನು ವಶಪಡಿಸಿಕೊಳ್ಳಲಾಗಿದೆ.
ಶ್ರೀಗಂಧವನ್ನು ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸಿದ ಜಾಬು ಷರೀಫ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಶಪಡಿಸಿಕೊಂಡ ಶ್ರೀಗಂಧವನ್ನು ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕತ್ತರಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಇದರ ಹಿಂದೆ ಬೃಹತ್ ಜಾಲ ಇರಬಹುದು ಎಂಬ ಸಂಶಯ ವ್ಯಕ್ತವಾಗಿದೆ.