ತುಮಕೂರು: ಸಿದ್ದಗಂಗಾ ಮಠದ ಡಾ. ಶಿವಕುಮಾರ ಶ್ರೀಗಳ ಆಶೀರ್ವಾದ ಪಡೆಯಲು ಆಗಮಿಸಿದ್ದೇವೆ. ಸಿದ್ಧಗಂಗಾ ಮಠಕ್ಕೆ ನಾನು ಇದುವರೆಗೆ ಮೂರು ಬಾರಿ ಬಂದಿದ್ದೇನೆ. ಹೊಸ ಚೇತನ, ಉತ್ಸಾಹದೊಂದಿಗೆ ಇಲ್ಲಿಂದ ವಾಪಸ್ ಹೋಗಿದ್ದೆ. ಬಸವಣ್ಣನವರ ತತ್ವವನ್ನು ಪಸರಿಸಲು ಸ್ವಾಮೀಜಿ ಶ್ರಮಿಸಿದ್ದಾರೆ. ಉತ್ತರದಲ್ಲಿ ಗಂಗಾ ದಕ್ಷಿಣದಲ್ಲಿ ಸಿದ್ಧಗಂಗಾ ಎಂದು ಅಟಲ್ ಜಿ ಹೇಳಿದ್ದರು.
ಡಾ. ಶಿವಕುಮಾರ ಸ್ವಾಮೀಜಿ ಆಧುನಿಕ ಬಸವಣ್ಣ. ತ್ರಿವಿಧ ದಾಸೋಹದ ಸಿದ್ಧಾಂತದ ಸಂದೇಶವನ್ನು ಮಠ ಸಾರಿದೆ. ಇಲ್ಲಿಗೆ ಯಾರೇ ಬಂದರೂ ಊಟ ಮಾಡದೆ ವಾಪಸ್ ಹೋಗಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಡಾ. ಶಿವಕುಮಾರ ಶ್ರೀಗಳ ಗುರುವಂದನಾ ಕಾರ್ಯಕ್ರಮದಲ್ಲಿ ಅಮಿತ್ ಶಾ ಮಾತನಾಡಿದ್ದಾರೆ.
ಇದಕ್ಕೂ ಮೊದಲು ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ 115ನೇ ಜಯಂತೋತ್ಸವ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತುಮಕೂರಿಗೆ ಆಗಮಿಸಿದ್ದರು. ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಸ್ವಾಗತಿಸಿದ್ದರು.
ಬಳಿಕ, ಅಮಿತ್ ಶಾ ರಸ್ತೆ ಮಾರ್ಗವಾಗಿ ಸಿದ್ದಗಂಗಾ ಮಠದತ್ತ ತೆರಳಿದ್ದರು. ಸಿದ್ದಗಂಗಾ ಮಠದಲ್ಲಿ ಅಮಿತ್ ಶಾ ಮೇಲೆ ಹೂವಿನ ಮಳೆಗೈದು ಅದ್ಧೂರಿ ಸ್ವಾಗತ ಕೋರಲಾಗಿತ್ತು. ಬಿಜೆಪಿ ಕಾರ್ಯಕರ್ತರಿಂದ ಅಮಿತ್ ಶಾಗೆ ಅದ್ಧೂರಿ ಸ್ವಾಗತ ನೀಡಲಾಗಿತ್ತು. ವಿದ್ಯಾರ್ಥಿಗಳು ಅಮಿತ್ ಶಾಗೆ ಪೂರ್ಣಕುಂಭ ಸ್ವಾಗತ ಕೋರಿದ್ದರು. ನಂತರ ಡಾ.ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದ ಶಾ, ಗದ್ದುಗೆಗೆ ಪೂಜೆ ಸಲ್ಲಿಸಿದ್ದರು.