ಚಾಮರಾಜನಗರ : ಕರ್ತವ್ಯ ಲೋಪ ಆರೋಪ ಹಿನ್ನೆಲೆಯಲ್ಲಿ ಚಾಮರಾಜನಗರದ ನಗರಸಭಾ ಕಂದಾಯ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ನಗರಸಭಾ ಕಂದಾಯ ಅಧಿಕಾರಿ ಜಯಶೀಲ ಎಂಬುವರೇ ಅಮಾನತು ಆದವರು. ಇವರನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ನಗರಸಭೆಯಲ್ಲಿ ಕಂದಾಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಜಯಶೀಲ ಅವರು ಸಾರ್ವಜನಿಕರಿಗೆ ಇ-ಆಸ್ತಿ ಮತ್ತು ಹಕ್ಕು ಬದಲಾವಣೆ ಸೇವೆಯಲ್ಲಿ ವಿಳಂಬ ಮಾಡುತ್ತಿದ್ದುದಲ್ಲದೆ, ಕರ್ತವ್ಯಲೋಪ ಎಸಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಯಶೀಲ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ತನಿಖೆ ನಡೆಸಿದ್ದರು. ಈ ವೇಳೆ 1192 ಅರ್ಜಿಗಳಿಗೆ ಸೇವೆ ನೀಡದೆ ಕರ್ತವ್ಯ ಲೋಪ ಎಸಗಿರುವ ಆರೋಪ ಸಾಬೀತಾಗಿದೆ. ಅಲ್ಲದೆ ಸಕಾಲ ತಂತ್ರಾಂಶದಲ್ಲಿ ಸೇವೆ ನೀಡಲಾಗಿದೆ ಎಂದು ಆನ್ಲೈನ್ ತಂತ್ರಾಂಶದಲ್ಲಿ ಸುಳ್ಳು ಮಾಹಿತಿ ನೀಡಿರುವುದು ತನಿಖೆಯಿಂದ ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಜಯಶೀಲ ಅವರನ್ನು ಅಮಾನತು ಮಾಡಲಾಗಿದೆ.