ಚಾಮರಾಜನಗರ : ಪ್ರಸ್ತುತ ಕಾಲಘಟ್ಟದಲ್ಲಿ ಕೇಳುವ ಪರಂಪರೆ ನಶಿಸಿದೆ. ವಾಚಾಳಿತನ ಹೆಚ್ಚಾಗಿದೆ. ರೇಡಿಯೋ ಕನ್ನಡ ಭಾಷೆಯನ್ನು ಕಲಿಸಿದರೆ ಟಿವಿ ಕನ್ನಡ ಭಾಷೆಯನ್ನು ಕೆಡಿಸುತ್ತಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಹಾಗೂ ನಾಟಕಕಾರ ಡಾ. ರಾಜಪ್ಪ ದಳವಾಯಿ ಬೇಸರ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ರಂಗ ವಾಹಿನಿ ಸಂಸ್ಥೆ ವಿಶ್ವ ರೇಡಿಯೋ ದಿನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಪ್ರತಿ ಗಂಧರ್ವ ನಾಟಕ ಓದು ಕಾರ್ಯಕ್ರಮವನ್ನು ರೇಡಿಯೋ ಕೇಳುವ ಮೂಲಕ ಉದ್ಘಾಟಿಸಿ ಮಾತನಾಡಿ, ಹಿಂದೆ ಕೇಳುವ ಮೂಲಕ ಗ್ರಹಿಕೆ ಜಾಸ್ತಿ ಇತ್ತು. ಈಗ ನೋಡುವ ಗುಣ ಬೆಳೆದಿದೆ. ರೇಡಿಯೋ ಕೇಳಿ ಬೇರೆ ಕೆಲಸಗಳನ್ನು ಮಾಡಬಹುದು. ಆದರೆ ಮೊಬೈಲ್ ನೋಡಿ ಬೇರೆ ಕೆಲಸ ಮಾಡಲು ಸಾಧ್ಯವಿಲ್ಲ. ನಾಟಕಗಳು ಕೇಳುವ ಮತ್ತು ನೋಡುವ ಪ್ರಕ್ರಿಯೆ ಎಂದರು.
ಕನ್ನಡ ನಾಡಿನ ಕಲೆ ನಾಟಕ ಒಂದು ಪ್ರದೇಶಕ್ಕೆ ಸೀಮಿತವಾಗಬಾರದು ನನ್ನ ಗುರು ಅಶೋಕಬಾದರದಿನ್ನಿ ಇಲ್ಲದಿದ್ದರೆ ನಾನು ನಾಟಕಕಾರನಾಗಿ ರೂಪುಗೊಳ್ಳುತ್ತಿರಲಿಲ್ಲ. ಒಂದು ಸಮಾಜ ನಾಟಕಕಾರರನ್ನು ಉಳಿಸುತ್ತದೆ. ರಂಗ ಚಟುವಟಿಕೆಗಳು ಒಂದು ಕಡೆ ಕೇಂದ್ರೀಕೃತವಾಗಬಾರದು. ಹಾಗಾಗಿ ನನ್ನ ಪ್ರತಿ ಗಂಧರ್ವ ನಾಟಕವನ್ನು ರಾಜ್ಯದ 25 ಜಿಲ್ಲೆಗಳಲ್ಲಿ ರಂಗ ಪದರ್ಶನ ಮಾಡಲಿದ್ದೇವೆ. ಚಾಮರಾಜನಗರ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಕಲಾವಿದರು ಇದ್ದಾರೆ. ಇಲ್ಲಿನ ಹಳ್ಳಿಗಳಲ್ಲಿ ಇಂದಿಗೂ ರಂಗಭೂಮಿ ಜೀವಂತವಾಗಿದೆ ಎಂದು ಹೇಳಿದರು.
ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಮಹಾಮನೆ ಮಾತನಾಡಿ ಪ್ರತಿ ಗಂಧರ್ವ ಒಂದು ವ್ಯಕ್ತಿಯ ಜೀವನದ ಸುತ್ತ ಸುತ್ತುವ ನಾಟಕ ಜೀವನ ಚರಿತ್ರೆ ನಾಟಕ ರೂಪ ಪಡೆದುಕೊಂಡು ಹೊಸ ಪರಂಪರೆಗೆ ನಾಂದಿ ಹಾಡಿದೆ ಎಂದು ತಿಳಿಸಿದರು.
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ವೆಂಕಟರಮಣಸ್ವಾಮಿಯ ರಂಗ ಗೀತೆ ಹಾಡಿದರು ಬಳಿಕ ಪ್ರತಿ ಗಂಧರ್ವ ನಾಟಕ ಓದಲಾಯಿತು.
ಹಿರಿಯ ರಂಗಕರ್ಮಿಕೆ. ವೆಂಕಟರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಂಗವಾಹಿನಿ ಸಂಸ್ಥೆ ಅಧ್ಯಕ್ಷ ಸಿಎಂ ನರಸಿಂಹಮೂರ್ತಿ ನಾಟಕಕಾರ ಡಾ. ವಿವೇಕಾನಂದ, ರಂಗ ವಾಹಿನಿ ಸಂಚಾಲಕ ರೂಬಿನ್ ಸಂಜಯ್, ಎಂ. ಶಶಿಕುಮಾರ್, ಎಸ್ಪಿ ಬಾಲಸುಬ್ರಮಣ್ಯಂ ಅಭಿಮಾನಿ ಬಳಗದ ಹೆಚ್ಎಂ. ಶಿವಣ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿಂಗಶೆಟ್ಟಿ, ಗೊರವರ ಶಿವ ಮಲ್ಲೇಗೌಡ ರಾಮಸಮುದ್ರದ ನಾಟಕ ರಾಜು, ಅಪ್ಪುಮಹದೇವ ಹಾಗೂ ರಂಗ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.