ಮೈಸೂರು: ನೂತನ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವ ಸಲುವಾಗಿ ಲಘು ಉದ್ಯೋಗ ಭಾರತಿ ಹಾಗೂ ಐಎಂಎಸ್ ಪ್ರತಿಷ್ಠಾನದ ವತಿಯಿಂದ ನಗರದ ಸಿಎಫ್ಟಿಆರ್ಐ ಆವರಣದಲ್ಲಿ ಮೇ 19ರಿಂದ ಮೂರು ದಿನಗಳ ಕಾಲ ಕೃಷಿ ಮತ್ತು ಆಹಾರ ತಂತ್ರಜ್ಞಾನ ಸಮ್ಮೇಳನ ಹಾಗೂ ಪ್ರದರ್ಶನ ಮೇಳ ಟೆಕ್ ಭಾರತ್ 2022ನ್ನು ಆಯೋಜಿಸಲಾಗಿದೆ.
ಸಿಎಫ್ಟಿಆರ್ಐ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷಿ ಮತ್ತು ಆಹಾರ ವಯಲದಲ್ಲಿ ಲಭ್ಯವಿರುವ ಸುಸ್ಥಿರ ತಂತ್ರಜ್ಞಾನಗಳು ರೈತರಿಗೂ ದೊರಕುವಂತೆ ಮಾಡುವುದಲ್ಲದೇ, ಈ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ರೈತರು ಉತ್ತಮ ಇಳುವರಿ ಹಾಗೂ ತಮ್ಮ ಬೆಳೆಗೆ ಮೌಲ್ಯವರ್ಧಿತ ಬೆಲೆ ಪಡೆದುಕೊಳ್ಳುವ ನಿಟ್ಟಿನಲ್ಲಿ ಮಾರ್ಗೋಪಾಯಗಳನ್ನು ತಿಳಿಸುವ ಕಾರ್ಯವನ್ನು ಈ ಸಮ್ಮೇಳನದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.
ಮೇ 19ರಂದು 10.30ಕ್ಕೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರದ ಆಹಾರ ಸಂಸ್ಕರಣೆ ಸಚಿವ ಪಶುಪತಿ ಕುಮಾರ್ ಪರಾಸ್, ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ಸಚಿವ ಕೈಲಾಸ್ ಚೌಧರಿ, ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿ.ಸಿ.ಪಾಟೀಲ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಲಿದ್ದಾರೆ. ಎಪಿಐಡಿಎ ಛೇರ್ಮನ್ ಡಾ.ಎಂ.ಅಂಗಮುತ್ತು, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಆಕ್ಸ್ಲರ್ ವೆಂಚರ್ಸ್ ಛೇರ್ಮನ್, ಇನ್ಫೋಸಿಸ್ನ ಮಾಜಿ ಸಿಇಓ ಕ್ರಿಷ್ ಗೋಪಾಲಕೃಷ್ಣನ್, ಸಂಸದ ಪ್ರತಾಪ್ಸಿಂಹ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಭಾ ಕಾರ್ಯಕ್ರಮದ ಬಳಿಕ ಕೃಷಿಯ ಅಭಿವೃದ್ಧಿ-ಮುಂದಿನ ದಶಕದ ಒಂದು ನೋಟ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ಎರಡನೇ ದಿನ ಮೊದಲ ಗೋಷ್ಠಿಯಾಗಿ ಆಹಾರ ಸಂಸ್ಕರಣೆಯಲ್ಲಿ ಗುಣಮಟ್ಟ, ಸುರಕ್ಷತೆ, ಪೊಟ್ಟಣ ತಂತ್ರಜ್ಞಾನ ಹಾಗೂ ವಿತರಣಾ ಜಾಲ ಕುರಿತು ಚರ್ಚೆ ನಡೆಯಲಿದೆ. ಮಧ್ಯಾಹ್ನ ಕೃಷಿ ತಂತ್ರಜ್ಞಾನ, ಆಹಾರ ತಂತ್ರಜ್ಞಾನ, ಆಹಾರಪೂರ್ವ ತಂತ್ರಜ್ಞಾನದಲ್ಲಿ ಮಹಿಳಾ ಉದ್ಯಮಿಗಳು ಕುರಿತು ಗೋಷ್ಠಿ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಮಧ್ಯಾಹ್ನ 4 ಗಂಟೆಗೆ ದುಂಡು ಮೇಜಿನ ಸಭೆ ನಡೆಯಲಿದೆ. ಇದರಲ್ಲಿ ಕೃಷಿ ಮತ್ತು ಆಹಾರ ತಂತ್ರಜ್ಞಾನ ಉದ್ಯಮದ ನೂರು ಮಂದಿ ಕಾರ್ಯಕಾರಿ ನಿರ್ದೇಶಕರು, ಹಿರಿಯ ಉಪಾಧ್ಯಕ್ಷರು, ಪ್ರೋತ್ಸಾಹದಾರರು ಭಾಗವಹಿಸಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್, ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ ಮತ್ತಿತರರು ಭಾಗವಹಿಸಲಿದ್ದಾರೆ. ಮೂರನೇ ದಿನ ಆಹಾರ ತಂತ್ರಜ್ಞಾನ-ಸಿರಿಧಾನ್ಯ ಸಂಸ್ಕರಣೆಯಲ್ಲಿ ವ್ಯಾಪಾರದ ಅವಕಾಶಗಳು ಕುರಿತು ಗೋಷ್ಠಿ ನಡೆಯುತ್ತದೆ. ಮಧ್ಯಾಹ್ನದ ಬಳಿಕ ಸಮಾರೋಪದ ಅಂಗವಾಗಿ ಸ್ಟಾರ್ಟ್ಅಪ್ಗಳನ್ನು ಉತ್ತೇಜಿಸುವ ಗೋಷ್ಠಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಹಲವಾರು ಉದ್ಯಮಿಗಳು ಭಾಗವಹಿಸಲಿದ್ದಾರೆ. ೪೦೦ ಮಂದಿ ರೈತರು, ಉದ್ಯಮಶೀಲರು, ಉದ್ಯಮಾಸಕ್ತರಿಗೆ ಮಾತ್ರ ಗೋಷ್ಠಿಗಳಲ್ಲಿ ಭಾಗವಹಿಸಲು ನೋಂದಣಿ ಮೂಲಕ ಅವಕಾಶ ನೀಡಲಾಗುತ್ತದೆ. ಸಮ್ಮೇಳನದ ಅಂಗವಾಗಿ ಆಯೋಜಿಸುವ ವಸ್ತು ಪ್ರದರ್ಶನವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರಿಸಲಾಗಿದೆ ಎಂದು ತಿಳಿಸಿದರು.