ಚಾಮರಾಜನಗರ: ಜಿಲ್ಲೆಯ ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಕಾಡಿನಲ್ಲಿ ಶ್ರೀಗಂಧದ ಮರವನ್ನು ಕಡಿದು ಸಾಗಾಣಿಕೆ ಮಾಡಲು ಯತ್ನಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ..
ಗುಂಡ್ಲುಪೇಟೆ ತಾಲ್ಲೂಕಿನ ದೇಶಿಪುರ ಕಾಲೋನಿಯ ನಾಗಯ್ಯ ,ಮಾರಯ್ಯ ಮತ್ತು ದೇಶಿಪುರ ಸುರೇಶ ಬಂಧಿತ ಆರೋಪಿಗಳು. ಇವರು ಬಂಡೀಪುರ ಅಭಯಾರಣ್ಯ ಮದ್ದೂರು ವಲಯದ ಬರಗಿ ಬೀಟನ ದೊಡ್ಡ ಹಳ್ಳ ಪ್ರದೇಶದಲ್ಲಿ ಶ್ರೀಗಂಧ ಮರವನ್ನು ಕಡಿದು ತುಂಡುಗಳನ್ನಾಗಿ ಮಾಡುತ್ತಿದ್ದ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಬಫರ್ ಜೋನ್ ಎಸಿಎಫ್ ರವೀಂದ್ರ ಮಾರ್ಗದರ್ಶನದಲ್ಲಿ ಮದ್ದೂರು ಆರ್ ಎಫ್ ಓ ಸುಧಾಕರ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ 21 ಕೆಜಿ ಶ್ರೀಗಂಧ ಮರದ ತುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.