ಮೈಸೂರು: ‘ಎಪಿಎಂಸಿ ಚುನಾವಣೆ ಫಲಿತಾಂಶ ಭವಿಷ್ಯದ ರಾಜಕೀಯದ ದಿಕ್ಸೂಚಿ’ ಅನ್ನೋದು ಸಿಎಂ ಸಿದ್ದರಾಮಯ್ಯ ಹೇಳಿಕೆ. ಈ ಹೇಳಿಕೆಯನ್ನು ಅವರು ಈಗಲೂ ಒಪ್ಪುವುದಾದರೆ ಅವರ ತವರು ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಹೀಗಾಗಿ, ಕಾಂಗ್ರೆಸ್ ಗೆ ಮೈಸೂರಲ್ಲಿ ಕಷ್ಟದ ದಿನಗಳು ಶುರುವಾಗಿವೆಯಾ ಎಂಬ ಅನುಮಾನ ಮೂಡಿಸಿದೆ.
ಗ್ರಾಮಾಂತರ ಭಾಗದ ಜನರ ಮನಸ್ಸು ಯಾರ ಕಡೆಗೆ ಇದೆ ಎಂದು ಅರಿಯವುದಕ್ಕೆ ಈ ಎಪಿಎಂಸಿ ಚುನಾವಣೆ ಸ್ಪಷ್ಟ ಮಾನದಂಡ ಅಂತ ಎಲ್ಲಾ ರಾಜಕೀಯ ಪಂಡಿತರು ಹಾಗೂ ಪಕ್ಷಗಳು ಒಪ್ಪಿಕೊಂಡಿವೆ. ಹೀಗಾಗಿ, ಮೈಸೂರು ಜಿಲ್ಲೆ ಭಾಗದ ಫಲಿತಾಂಶ ಜೆಡಿಎಸ್ ಗೆ ಸಂತಸ ಹೆಚ್ಚಿಸಿದೆ. ಮುಖ್ಯಮಂತ್ರಿಗಳ ತವರಲ್ಲಿ ತಮ್ಮ ಶಕ್ತಿ ದಿನ ದಿನಕ್ಕೂ ವೃದ್ಧಿಸುತ್ತಿದೆ ಎಂದು ದಳಪತಿಗಳು ಬೀಗುವುದಕ್ಕೆ ಶುರು ಮಾಡಿದ್ದಾರೆ.
7 ತಾಲೂಕಿನ ಎಪಿಎಂಸಿ ಚುನಾವಣೆಯಲ್ಲಿ ನಾಲ್ಕು ಕಡೆ ಜೆಡಿಎಸ್ ಕಾಂಗ್ರೆಸ್ ಅನ್ನು ಹಿಂದಕ್ಕಟ್ಟಿದೆ. ಇನ್ನೂ ಒಂದು ಕಡೆ ಸಮ ಬಲ ಪ್ರದರ್ಶಿಸಿದೆ. ಕೇವಲ ಎರಡು ಕಡೆ ಕಾಂಗ್ರೆಸ್ ಜೆಡಿಎಸ್ ಅನ್ನು ಹಿಂದಕ್ಕಟ್ಟಿದೆ. ಆದರೆ, ಸರ್ಕಾರದಿಂದ ನಡೆಯುವ ನಾಮ ನಿರ್ದೇಶನದ ಸದಸ್ಯತ್ವದ ಮೂಲಕ ಕಾಂಗ್ರೆಸ್ ಐದು ಕಡೆ ಅಧಿಕಾರ ಹಿಡಿಯುತ್ತೆ. ಇಲ್ಲಿ ಪ್ರಶ್ನೆ ಇರುವುದು ಎಷ್ಟು ಎಪಿಎಂಸಿಗಳಲ್ಲಿ ಅಧಿಕಾರ ಹಿಡಿದರು ಎಂಬುದಲ್ಲ. ಬದಲಾಗಿ ಚುನಾವಣೆಯಲ್ಲಿ ಎಷ್ಟು ಸ್ಥಾನ ಪಡೆದವು, ಗ್ರಾಮೀಣ ಮತದಾರರ ಒಲವು ಯಾವ ಕಡೆ ಇದೆ ಎಂಬುದನ್ನು ಈ ಫಲಿತಾಂಶದ ಮೂಲಕ ಸೂಕ್ಷ್ಮವಾಗಿ ಗ್ರಹಿಸಬೇಕಿದೆ. ಈ ಗ್ರಹಿಕೆಯ ಅರ್ಥದಲ್ಲೇ ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆಯುತ್ತಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಎಪಿಎಂಸಿ ಚುನಾವಣೆಯಲ್ಲಿ ಮೂವರು ಶಾಸಕರು ಇರೋ ಜೆಡಿಎಸ್, ಒಟ್ಟು 38 ಸ್ಥಾನ ಗೆದ್ದಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಸಂಖ್ಯೆಯಲ್ಲಿ 12 ಸದಸ್ಯರು ಹೆಚ್ಚಾಗಿದ್ದಾರೆ. ಇನ್ನೂ ಸಿಎಂ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಹಾಗೂ ಇಬ್ಬರು ಗ್ರಾಮಾಂತರ ಭಾಗದ ಶಾಸಕರನ್ನು ಒಳಗೊಂಡ ಕಾಂಗ್ರೆಸ್ 43 ಸ್ಥಾನ ಗೆದ್ದಿದೆ. ಕಳೆದ ಬಾರಿಗೆ ಹೋಲಿಸಿದರೆ ಕೇವಲ ಎರಡು ಸ್ಥಾನ ಹೆಚ್ಚಳಗೊಂಡಿದೆ. ಇನ್ನೂ ಉಪ ಚುನಾವಣೆ ನಡೆಯುವ ನಂಜನಗೂಡು ಕ್ಷೇತ್ರದ ಲೆಕ್ಕ ನೋಡಿದರೆ, ಬಿಜೆಪಿ ಶಕ್ತಿ ಹೆಚ್ಚಾದಂತೆ ಕಾಣುತ್ತಿದೆ. ಒಟ್ಟು 11 ಎಪಿಎಂಸಿ ಸದಸ್ಯ ಸ್ಥಾನಗಳಲ್ಲಿ 8 ಕಾಂಗ್ರೆಸ್ ಪಾಲಾಗಿದ್ದರೆ ಐದು ಬಿಜೆಪಿ ಪಾಲಾಗಿದೆ. ಇದು ನಂಜನಗೂಡು ಕ್ಷೇತ್ರದ `ಕಮಲ’ದಲ್ಲಿ ವಿಶ್ವಾಸ ಮೂಡಿಸಿದೆ.
ಮೈಸೂರು, ಚಾಮರಾಜನಗರ ಭಾಗದಲ್ಲಿ ಸಿದ್ದರಾಮಯ್ಯ ಟೀಂ ಅಂದರೆ ರಾಜಕೀಯ. ರಾಜಕೀಯ ಅಂದರೆ ಸಿದ್ದರಾಮಯ್ಯ ಟೀಂ ಅನ್ನೋ ವಾತಾವರಣ ಇತ್ತು. ಸಿದ್ದರಾಮಯ್ಯ ಅವರ ಗಾಳಿ ಯಾವ ಕಡೆ ಬೀಸುತ್ತೋ ಆ ಕಡೆ ಎರಡು ಜಿಲ್ಲೆಗಳ ರಾಜಕೀಯ ಸಾಗುತ್ತಿತ್ತು. ಇಂತಹ ಸಿದ್ದರಾಮಯ್ಯ ಭದ್ರಕೋಟೆಯಲ್ಲಿ ಅವರೇ ಮುಖ್ಯಮಂತ್ರಿ ಆಗಿದ್ದಾಗ ಕಾಂಗ್ರೆಸ್ ಶಕ್ತಿ ಕಡಿಮೆ ಆಗುತ್ತಿರುವುದು, ಜೆಡಿಎಸ್ ಶಕ್ತಿ ಹೆಚ್ಚಾಗುತ್ತಿರುವುದು ಕಾಂಗ್ರೆಸ್ ಪಾಳಯದಲ್ಲಿ ಆತಂಕ ಮೂಡಿಸಿದೆ.
ಜಿಲ್ಲಾ ಪಂಚಾಯತ್ ಚುನಾವಣೆಯಲ್ಲೂ ಕಾಂಗ್ರೆಸ್ ಗೆ ಇಲ್ಲಿ ಗದ್ದುಗೆ ಸಿಗಲಿಲ್ಲ. ಇನ್ನು ಎಪಿಎಂಸಿ ಚುನಾವಣೆಯಲ್ಲಿ ಗದ್ದುಗೆ ಸಿಗುತ್ತಿದ್ದರೂ ಜನರಿಂದ ಆಯ್ಕೆಯಾದ ಸದಸ್ಯರ ಲೆಕ್ಕದಲ್ಲಿ ಜೆಡಿಎಸ್ ಮುಂದಿದೆ. ಹೀಗಾಗಿ, ಎಲ್ಲೋ ಒಂದು ಕಡೆಯಲ್ಲಿ ಕಾಂಗ್ರೆಸ್ ಸಂಘಟನೆ ಲೆಕ್ಕಚಾರ ಉಲ್ಟಾ ಆಗ್ತಿದ್ದೆಯಾ ಎಂಬ ಅನುಮಾನವಂತೂ ಮೂಡಿದೆ.
ಸಿದ್ದರಾಮಯ್ಯ ಮುಖ್ಯಮಂತ್ರಿ ಆಗದಿದ್ದ ಸಂದರ್ಭದಲ್ಲೇ ಮೈಸೂರು ಭಾಗದಲ್ಲಿ ಯಾವ ಚುನಾವಣೆ ನಡೆದರೂ ಅವರ ಲೆಕ್ಕದಂತೆ ದಾಳ ಬೀಳುತ್ತಿತ್ತು. ಇಂತಹದರಲ್ಲಿ ಅವರು ಸಿಎಂ ಗದ್ದುಗೆ ಮೇಲೆ ಕೂತಾಗ ತವರು ಜಿಲ್ಲೆಯ ಚುನಾವಣಾ ದಾಳಗಳು ಉಲ್ಟಾ ಆಗುತ್ತಿರುವುದು ಸ್ವತಃ ಸಿದ್ದರಾಮಯ್ಯ ಟೀಂ ಅನ್ನು ಕಂಗೆಡಿಸಿರುವುದು ಬಹಿರಂಗವಾಗಿ ಹೇಳಲಾಗದ ಸತ್ಯ. ಭವಿಷ್ಯದಲ್ಲಿ ಮಕ್ಕಳ ರಾಜಕಾರಣ ಶುರು ಮಾಡಿಸೋ ಉಮೇದಿಯಲ್ಲಿರುವ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಈಗಲೇ ಪಕ್ಷದ ಸಂಘಟನೆಯ ಬಿರುಕು ಮುಚ್ಚದೆ ಇದ್ದರೆ ಕಷ್ಟ ಎದುರಾಗೋದು ಸ್ಪಷ್ಟ ಅನ್ನೋದು ಮೈಸೂರು ಕಾಂಗ್ರೆಸ್ ವಲಯದಲ್ಲಿನ ಮಾತು…