ಮಂಡ್ಯ: ನಗರದ ಗುತ್ತಲಲ್ಲಿ ಕಾರ್ಯನಿರ್ವಹಿಸುತ್ತಿರುವ ಪಶು ಆಸ್ಪತ್ರೆ ಸ್ಥಳಾಂತರ ಮಾಡಲು ಮುಂದಾಗಿರುವುದನ್ನು ವಿರೋಧಿಸಿದ ಜನರು ತಮ್ಮ ಸಾಕುಪ್ರಾಣಿಗಳೊಂದಿಗೆ ಆಸ್ಪತ್ರೆ ಮುಂಭಾಗಕ್ಕೆ ಆಗಮಿಸಿ ಪ್ರತಿಭಟಿಸಿದ ಘಟನೆ ನಡೆದಿದೆ.
ಆಸ್ಪತ್ರೆ ಆವರಣದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲೂಕು ನೆಲವಾಗಿಲು ಗ್ರಾಮಕ್ಕೆ ಈ ಪಶು ಆಸ್ಪತ್ರೆಯನ್ನು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಜಿಲ್ಲೆಯು ಹೈನುಗಾರಿಕೆಗೆ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಗುತ್ತಲು, ಹೊಸಹಳ್ಳಿ, ಕಲ್ಲಹಳ್ಳಿ, ಚಿಕ್ಕೇಗೌಡನದೊಡ್ಡಿ, ಸ್ವರ್ಣಸಂದ್ರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಗೆ ಪಶು ಆಸ್ಪತ್ರೆ ತುಂಬಾ ಅವಶ್ಯಕವಾಗಿದ್ದು, ಏಕಾಏಕಿ ಪಶು ಆಸ್ಪತ್ರೆಯನ್ನು ವರ್ಗಾವಣೆ ಮಾಡಿರುವ ಸರ್ಕಾರದ ಕ್ರಮವನ್ನು ಖಂಡಿಸಿದರು.
ಪಶು ಆಸ್ಪತ್ರೆ ವರ್ಗಾವಣೆಯಿಂದ ಇಲ್ಲಿನ ರೈತರು ಮತ್ತು ಪಶು ಸಂಗೋಪಕರು (ಹಾಲು ಉತ್ಪಾದಕರು) ಸುಮಾರು 6 ಕಿ.ಮೀ. ದೂರದಲ್ಲಿರುವ ಬೇಲೂರು, ಬಿ. ಹೊಸೂರು ಪಶು ಆಸ್ಪತ್ರೆಗಳಿಗೆ ತೆರಳಬೇಕಾಗಿದೆ ಎಂದು ದೂರಿದರು.
ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸ್ಥಳಾವಕಾಶದ ಕೊರತೆ ಕಂಡುಬಂದಲ್ಲಿ ನಾವು ಸ್ಥಳಾವಕಾಶ ನೀಡಲು ಸಿದ್ಧರಾಗಿದ್ದೇವೆ. ಸ್ಥಳವನ್ನು ಕಾಯ್ದಿರಿಸಿದ್ದೇವೆ. ಎಲ್ಲವನ್ನೂ ಗಮನಕ್ಕೆ ತೆಗೆದುಕೊಳ್ಳದ ಇಲಾಖೆ ಮತ್ತು ಸರ್ಕಾರ ಏಕಾಏಕಿ ಪಶು ಆಸ್ಪತ್ರೆ ಮತ್ತು ಸಿಬ್ಬಂದಿಯನ್ನು ಸ್ಥಳಾಂತರ ಮಾಡಲು ಮುಂದಾಗಿದೆ ಎಂದು ದೂರಿದ ಪ್ರತಿಭಟನಾಕಾರರು, ಪಶು ಆಸ್ಪತ್ರೆಯನ್ನು ಅವೈಜ್ಞಾನಿಕ ಕಾರಣಗಳನ್ನು ನೀಡಿ ವರ್ಗಾಯಿಸುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ಒಂದು ವೇಳೆ ಸ್ಥಳಾಂತರ ಮಾಡಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸುವುದರ ಜೊತೆಗೆ ನಿರಂತರವಾಗಿ ಧರಣಿ ನಡೆಸಬೇಕಾಗುತ್ತದೆ ಎಂದು ಇದೇ ವೇಳೆ ಎಚ್ಚರಿಕೆ ನೀಡಿದರು.