ಮೈಸೂರು: ಭೂ ಗಳ್ಳರು ಸುಳ್ಳು ದಾಖಲೆ ಸೃಷ್ಟಿಸಿಕೊಂಡು ನಿರ್ಮಿಸಿದ್ದ ಅನಧಿಕೃತ ಕಟ್ಟಡವನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನೇತೃತ್ವದ ತಂಡವು ಬುಧವಾರ ನೆಲಸಮಗೊಳಿಸಿ ಭೂಮಿಯನ್ನು ಮೂಡಾ ವಶಕ್ಕೆ ಪಡೆಯಲಾಯಿತು.
ನಗರದ ಬನ್ನಿಮಂಟಪದ ‘ಬಿ’ ಬಡಾವಣೆಯ ನಿವೇಶನ ಸಂಖ್ಯೆ 384 ಮತ್ತು 400ದ ನಿವೇಶನದಲ್ಲಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಅನಧಿಕೃತ ಕಟ್ಟಡವನ್ನು ನಿರ್ಮಿಸಲಾಗಿತ್ತು. ಅಲ್ಲದೇ ಈ ಜಾಗದಲ್ಲಿ ಹಲವು ವರ್ಷಗಳಿಂದ ಲಾರಿ ಟ್ರಾನ್ಸ್ ಪೋರ್ಟ್ ಕಚೇರಿಯನ್ನು ನಿರ್ಮಿಸಿಕೊಂಡು, ತಂತಿ ಬೇಲಿಯನ್ನು ಹಾಕಲಾಗಿತ್ತು.
ಈ ವಿಷಯ ಅರಿತ ಮುಡಾ ಅಧಿಕಾರಿಗಳು ಸರ್ವೆ ನಡೆಸಿ ಅಂದಾಜು 2 ಕೋಟಿ ರೂ. ವೆಚ್ಚದ ನಿವೇಶನದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ಬುಧವಾರ ಜೆಸಿಬಿ ಮೂಲಕ ನೆಲಸಮಗೊಳಿಸಿ, ಸದರಿ ಜಾಗವನ್ನು ಮುಡಾ ವಶಕ್ಕೆ ಪಡೆದಿದ್ದಾರೆ.
ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ವಲಯ ಅಧಿಕಾರಿ ನರೇಂದ್ರಬಾಬು, ಸಹಾಯಕ ಅಭಿಯಂತರ ಮಣಿ ಹಾಗೂ ಸಿಬ್ಬಂದಿ ಇದ್ದರು.