ಮೈಸೂರು: ರಾಜ್ಯದಲ್ಲಿ ಕೋಲಾಹಲ ಎಬ್ಬಿಸಿರುವ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ಹಾಗೂ ಸಂಜನಾ ಗಲ್ರಾನಿ ಅವರು ವಿಚಾರಣೆಯಲ್ಲಿ ಹೇಳಿರುವ ಪ್ರಮುಖ ಮುಖಂಡರುಗಳ ಹೆಸರನ್ನು ದಾಖಲೆ ಸಹಿತವಾಗಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಒತ್ತಾಯಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡ್ರಗ್ಸ್ ದಂಧೆ ಪ್ರಕರಣ ದೇಶಾದ್ಯಂತ ಹರಡಿಕೊಂಡಿರುವ ದೊಡ್ಡ ಜಾಲವಾಗಿದ್ದು, ಬಿಜೆಪಿಯವರು ಇದರ ಲಾಭ ಪಡೆಯಲು ಹೋಗಿ, ಅವರೇ ಡ್ರಗ್ಸ್ ಉರುಳಿನ ಬಲೆಯಲ್ಲಿ ಸಿಲುಕಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಡ್ರಗ್ಸ್ ಪ್ರಕರಣವನ್ನು ಹಿಡಿದುಕೊಂಡಿತು. ಆದರೆ ಈಗ ಅವರೇ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ಡ್ರಗ್ಸ್ ದಂಧೆ ತನಿಖೆಯು ಹೈಕೋರ್ಟ್ ಅಧೀನದಲ್ಲಿ ತನಿಖೆ ನಡೆಯಬೇಕು ಎಂದರು.
ನಟಿ ಕಂಗನಾ ಬಿಜೆಪಿಯ ಅಂಬಾಸಿಡರ್ ಆಗಿದ್ದು, ಮುಂಬೈನಲ್ಲಿ ಸಂಯುಕ್ತ ಸರ್ಕಾರವನ್ನು ಟೀಕಿಸಲು ಅವರನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಅವರಿಗೆ ಎಲ್ಲಾ ಹಂತದ ಭದ್ರತೆ ಕೊಡುತ್ತಿದ್ದು, ಇದು ಈ ದೇಶದ ದುರಂತ ಎಂದು ಹೇಳಿದರು.
ಬಾಯಿಗೆ ಬಂದಂತೆ ಮಾತನಾಡುವವರಿಗೆ ವೈ ಶ್ರೇಣಿಯ ಭದ್ರತೆ ಕೊಡುತ್ತಾರೆ. ಆದರೆ ದೇಶಕ್ಕಾಗಿ ಬಲಿದಾನ ನೀಡಿದ ಕುಟುಂಬಕ್ಕೆ ಸೇರಿರುವ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಅವರುಗಳಿಗೆ ನೀಡಿದ್ದ ಝ಼ಡ್ ಪ್ಲಸ್ ಭದ್ರತೆಯನ್ನು ವಾಪಸ್ ಪಡೆದು ಕೇವಲ ಪೊಲೀಸ್ ಭದ್ರತೆ ನೀಡಿದ್ದಾರೆ. ದೇಶದ ಪ್ರಧಾನ ಮಂತ್ರಿ ಮತ್ತು ಗೃಹ ಮಂತ್ರಿ ಅಮಿತ್ ಷಾ ನಂತರ ನಟಿ ಕಂಗನಾ ರಣವತ್ಗೆ ಹೆಚ್ಚಿನ ಭದ್ರತೆ ನೀಡಲಾಗಿದೆ ಎಂದರು.
ಕೆಪಿಸಿಸಿ ವಕ್ತಾರರಾದ ಮಂಜುಳಾ ಮಾನಸ ಮಾತನಾಡಿ, ಇತ್ತೀಚಿಗೆ ಬಹುತೇಕ ಎಲ್ಲಾ ಗಂಭೀರ ಪ್ರಕರಣಗಳನ್ನು ಹಳ್ಳ ಹಿಡಿಸಲಾಗುತ್ತಿದೆ. ಅದೇ ರೀತಿ ಡ್ರಗ್ಸ್ ದಂಧೆ ಪ್ರಕರಣದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಈ ಮೂಲಕ ತನಿಖೆಯ ದಿಕ್ಕು ತಪ್ಪಿಸಲಾಗುತ್ತಿದೆ. ಆದರೆ ಡ್ರಗ್ಸ್ ದಂಧೆ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರಿದ್ದರೂ, ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.