ಬೆಳ್ತಂಗಡಿ: ಸಮಾಜದ ಆಗುಹೋಗುಗಳನ್ನು ಸಮಾಜಕ್ಕೆ ತಿಳಿಯಪಡಿಸುತ್ತಿರುವ ಪತ್ರಕರ್ತರ ಕಾರ್ಯ ಶ್ಲಾಘನೀಯ. ಕೋವಿಡ್ ಸಂದರ್ಭದಲ್ಲೂ ಜನರನ್ನು ಎಚ್ಚರಿಸುವ ಕಾರ್ಯ ಮಾಡಿದ್ದಾರೆ. ಸರಕಾರ ಇವರ ಶ್ರಮವನ್ನು ಗುರುತಿಸಿ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಕನ್ಯಾಡಿ ಶ್ರೀಗುರುದೇವ ಮಠಾಧಿಪತಿ, ನಿತ್ಯಾನಂದ ನಗರದ ಶ್ರೀರಾಮ ಕ್ಷೇತ್ರ ಸಂಸ್ಥಾನಂನ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶಿಸಿದರು.
ಅವರು ತಮ್ಮ ಮಠದಲ್ಲಿ ಆಚರಿಸಿದ ಚಾತುರ್ಮಾಸ್ಯ ಸಂದರ್ಭ ಬೆಳ್ತಂಗಡಿ ತಾಲೂಕು ಪತ್ರಕರ್ತರು ನೀಡಿದ ಸಹಕಾರವನ್ನು ಸ್ಮರಿಸಿ ಆಶೀರ್ವದಿಸಿದರು.
ಪ್ರಸ್ತುತ ಮಹಾಮಾರಿ ಕೊರೊನಾ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಅದರಲ್ಲಿಯೂ ವಿಶೇಷವಾಗಿ ಸಮಾಜದ ಒಳಿತಿಗಾಗಿ, ಕಟ್ಟಕಡೆಯ ಕುಟುಂಬದ ಅಭಿವೃದ್ಧಿಗಾಗಿ ಉತ್ತಮ ವರದಿ ಮಾಡುವ ಮೂಲಕ ಸೇವೆ ಮಾಡುವ ಪತ್ರಿಕಾರಂಗವೂ ಕೂಡ ಇಂದು ಆರ್ಥಿಕ ಸಂಕಷ್ಟಕ್ಕೊಳಗಾಗಿದೆ. ಹಾಗಾಗಿ, ಪತ್ರಿಕಾ ರಂಗಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.
ಹಿಂದೆ ಋಷಿಮುನಿಗಳು, ಸಂತರು, ಜ್ಞಾನಿಗಳ ತಪಸ್ಸಿನ ಫಲವಾಗಿ ಮೂಡಿಬಂದ ಹಲವಾರು ಬರಹಗಳಿಂದ ಇಂದಿನ ಜನಾಂಗ ಅದರಿಂದ ಜ್ಞಾನ ಹೆಚ್ಚಿಸಿಕೊಳ್ಳುತ್ತಿದೆ. ಇಂದು ಅದಕ್ಕೆ ಪೂರಕವಾಗಿ ಪತ್ರಕರ್ತರು, ದೃಶ್ಯ ಮಾಧ್ಯಮದವರು ಸೇರಿ ಒಟ್ಟು ಪತ್ರಿಕಾರಂಗ ಸಮಾಜ ಜಾಗೃತಿಗೊಳಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದಾರೆ. ಅನೇಕ ಪತ್ರಕರ್ತರು, ದೃಶ್ಯ ಮಾಧ್ಯಮದವರು ಸಂಕಷ್ಟದಲ್ಲಿದ್ದು, ಇವರಿಗೆ ಶಕ್ತಿ ತುಂಬುವ ಕಾರ್ಯ ಸರ್ಕಾರ ಮಾಡಬೇಕು ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಮಾತನಾಡಿ, ಶೈಕ್ಷಣಿಕ ಸೇವೆ, ಧಾರ್ಮಿಕ ಸಂದೇಶಗಳನ್ನು ನೀಡುವ ಜತೆಗೆ ಉತ್ತಮ ಪರಿಸರ ನಿರ್ಮಾಣ ಮಾಡುವಲ್ಲಿ ಕನ್ಯಾಡಿ ಶ್ರೀಗಳ ಸೇವೆ ಅಪಾರ. ಇವರ ಮಾರ್ಗದರ್ಶನದಿಂದ ನಮಗೆ ಇನ್ನಷ್ಟು ಕೆಲಸ ಮಾಡಲು ಶಕ್ತಿ ಬರುತ್ತೆ ಎಂದರು.
ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವಿರೇಂದ್ರ ಹೆಗ್ಗಡೆಯವರ ಸೇವೆ, ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಶ್ರೀಗಳ ತ್ಯಾಗದ ಮನೋಭಾವ ಇಡೀ ಬೆಳ್ತಂಗಡಿ ತಾಲೂಕನ್ನು ಜಗತ್ತು ಗುರುತಿಸುವಂತೆ ಮಾಡಿದೆ. ಇಂತಹ ತಾಲೂಕಿನಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುವ ಭಾಗ್ಯ ಸಿಕ್ಕಿರುವುದು ನಮ್ಮ ಹಿರಿಯರು ಮಾಡಿದ ಪುಣ್ಯದ ಫಲ ಎಂದರು.
ಬಳಿಕ ಪತ್ರಕರ್ತರನ್ನು ಶ್ರೀಗಳು ಗೌರವಿಸಿದರು.