ಮೈಸೂರು: ‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಕಬಳಿಕೆ ಪ್ರಕರಣದಲ್ಲಿ ಶಾಮೀಲಾಗಿರುವ ನಂದೀಶ್ ಹಂಚೆ ಅವರನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಅದಕ್ಕೆ ಸಹಕರಿಸಿದ ಮುಡಾ ಆಯುಕ್ತರನ್ನು ಅಮಾನತುಗೊಳಿಸಬೇಕು’ ಎಂದು ಸಾಹಿತಿಗಳು ಆಗ್ರಹಿಸಿದ್ದಾರೆ.
ಈ ಕುರಿತು ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಬಂಜಗೆರೆ ಜಯಪ್ರಕಾಶ್, ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮಹೇಶ್ಚಂದ್ರ ಗುರು, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು ಅವರು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
‘ನಂದೀಶ್ ಅವರು ತಮ್ಮ ಅಧಿಕಾರ ದುರ್ಬಳಕೆ ಮಾಡಿ ಕೊಂಡು, ವಿಜಯನಗರ 4ನೇ ಹಂತದಲ್ಲಿ ಸುಮಾರು 4 ಕೋಟಿ ಬೆಲೆ ಬಾಳುವ (50×80 ಅಡಿ) ನಿವೇಶನವನ್ನು ಪತ್ನಿ ದೀಪಾ ಹಂಚೆ ಅವರ ಹೆಸರಿಗೆ ಅಕ್ರಮವಾಗಿ ಒಂದೇ ದಿನದಲ್ಲಿ ವರ್ಗಾಯಿಸಿಕೊಂಡಿದ್ದಾರೆ. ಇದಕ್ಕೆ ಮುಡಾ ಅಧಿಕಾರಿಗಳು ಸಹಕರಿಸಿದ್ದಾರೆ’ ಎಂದು ಪತ್ರದಲ್ಲಿ ದೂರಿದ್ದಾರೆ.
1994ರಲ್ಲಿ ಐಎಫ್ಎಸ್ ಅಧಿಕಾರಿ ನಾಗರಾಜು ಎಂಬುವರಿಗೆ ಹಂಚಿಕೆಯಾಗಿದ್ದ ನಿವೇಶನವನ್ನು . ಅವರು ಮುಡಾಗೆ ಹಿಂತಿರುಗಿಸಿದ್ದರು. ಅವರು ಪಾವತಿಸಿದ್ದ ಮುಂಗಡ ಹಣವನ್ನು ಪ್ರಾಧಿಕಾರವು 2006ರಲ್ಲಿ ಮರು ಪಾವತಿಸಿತ್ತು. 2019ರಲ್ಲಿ ಅವರು ನಿಧನರಾದರು. ಆದರೆ, ನಿವೇಶನ ಹಿಂಪಡೆದ ದಾಖಲೆಗಳನ್ನು ಮುಡಾ ಅಧಿಕಾರಿಗಳು ಮುಚ್ಚಿಟ್ಟಿದ್ದು ಈಚೆಗೆ ಐಎಫ್ಎಸ್ ಅಧಿಕಾರಿ ಪತ್ನಿ ಶಶಿಕಲಾ ಅವರ ಹೆಸರಿಗೆ ಪೌತಿ ಖಾತೆ ಆಧಾರದಲ್ಲಿ ಈ ನಿವೇಶನವನ್ನು ಅಕ್ರಮವಾಗಿ ವರ್ಗಾಯಿಸಲಾಗಿತ್ತು. ರಾಜಕೀಯ ಪ್ರಭಾವದಿಂದ ಈ ಪ್ರಕ್ರಿಯೆ ನಡೆದಿದೆ. ಒಂದೇ ದಿನದಲ್ಲಿ ಖಾತೆ ವರ್ಗಾವಣೆ, ಕ್ರಯಪತ್ರ ಮಾಡಿಕೊಡಲಾಗಿದೆ’ ಎಂದು ಆರೋಪಿಸಿದ್ದಾರೆ.
‘ಅದೇ ದಿನ ಶಶಿಕಲಾ ಅವರು ದೀಪಾ ಹಂಚೆ ಅವರಿಗೆ ಶುದ್ಧ ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ. ದೀಪಾ ಅವರು ಪತಿ ನಂದೀಶ್ ಹಂಚೆ ಅವರ ಹೆಸರನ್ನು ಮರೆಮಾಚಿ ಕ್ರಯಪತ್ರದಲ್ಲಿ ತಮ್ಮ ತಂದೆ ಹೆಸರು ನಮೂದಿಸಿದ್ದಾರೆ. ನಂದೀಶ್ ಅವರು ತಮ್ಮ ಖಾತೆಯಿಂದ ಒಟ್ಟು 60 ಲಕ್ಷವನ್ನು ಶಶಿಕಲಾ ಅವರಿಗೆ ಪಾವತಿಸಿ ಪತ್ನಿಗೆ ಅಕ್ರಮವಾಗಿ ನಿವೇಶನ ದೊರಕಿಸಿಕೊಡುವಲ್ಲಿ ನೆರವಾಗಿದ್ದಾರೆ. ಈ ಮೂಲಕ ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಕ್ರಮ ಮಾರಾಟದಲ್ಲಿ ಮುಡಾ ಆಯುಕ್ತರೂ ಕೈಜೋಡಿಸಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.