ಮೈಸೂರು: ಅರಮನೆಯಿಂದ-ಬನ್ನಿಮಂಟಪದವರೆಗೆ ಗಜಪಡೆ ಪ್ರತಿದಿನ ತಾಲೀಮಿನ ವೇಳೆ ಕಾಂಕ್ರಿಟ್ ರಸ್ತೆಯಲ್ಲಿ ಸಾಗಾಬೇಕಾಗಿರುವುದರಿಂದ ಆನೆಗಳ ಕಾಲಿಗೆ ಚುಚ್ಚುವ ಮೊಳೆಗಳು, ಕಬ್ಬಿಣದ ಚೂರುಗಳು ಚುಚ್ಚುವುದರಿಂದ ಇದನ್ನು ತೆಗೆಯಲು ಮ್ಯಾಗ್ನೆಟ್ ಟ್ರ್ಯಾಲಿ ಅಳವಡಿಸಲಾಗಿದೆ.
ದಸರಾ ಗಜಪಡೆಗಳಿಗೆ ಜಂಬೂ ಸವಾರಿ ತಾಲೀಮಿಗಾಗಿಯೇ 45 ದಿನ ಮುಂಚಿತವಾಗಿ ಕಾಡಿನಿಂದ ಮೈಸೂರು ಅರಮನೆಗೆ ಬರುತ್ತವೆ. ಕಾಡಿನ ಸ್ವಚ್ಛಂದ ಪರಿಸರಕ್ಕೆ ಹೊಂದಿಕೊಂಡಿರುವ ಆನೆಗಳು ಇಲ್ಲಿ ಕಾಂಕ್ರಿಟ್ ಮತ್ತು ಡಾಂಬರ್ ರಸ್ತೆಗಳಲ್ಲಿ ಸಂಚರಿಸುವುದೇ ದುಸ್ಸಾಹಸ ಆದರೂ ಅನಿವಾರ್ಯವಾಗಿ ರಸ್ತೆಯಲ್ಲಿ ಸಾಗಿ ಜಂಬೂ ಸವಾರಿ ಯಶಸ್ವಿಗೊಳಿಸುವ ಹೊಣೆ ಗಜಪಡೆಯ ಮೇಲಿವೆ. ಇದಕ್ಕಾಗಿಯೇ ಗಜಪಡೆ ನೋವಿನಲ್ಲಿ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆಯುತ್ತವೆ.
ಇನ್ನೂ ಕಾಂಕ್ರಿಟ್ ಮತ್ತು ಡಾಂಬರಿನಲ್ಲಿ ನಡೆಯುವುದೇ ಕಷ್ಟ. ರಸ್ತೆಯಲ್ಲಿನ ಮೊಳೆ, ಕಬ್ಬಿಣದ ಚೂರುಗಳು ಗಜಪಡೆಯ ಕಾಲುಗಳಿಗೆ ಚುಚ್ಚಿದರೆ ಆನೆಗಳ ಗತಿಯೇನು? ಅಷ್ಟಕ್ಕೂ ಈ ಹಿಂದೆ ಹಲವು ಬಾರಿ ಇಂತಹ ದುರ್ಘಟನೆಗಳು ಸಹ ನಡೆದಿವೆ ಎಂದು ಮಾವುತರು ನೆನಪಿಸಿಕೊಂಡಿದ್ದಾರೆ. ಈ ಹಿಂದೆ ಅಂಬಾರಿ ಹೊರುತ್ತಿದ್ದ ಬಲರಾಮನಿಗೆ ತಾಲೀಮಿನ ವೇಳೆಯಲ್ಲಿ ಕಬ್ಬಿಣದ ಮೊಳೆಯೊಂದು ಚುಚ್ಚಿ ಅದನ್ನು ಗಮನಿಸಲಾಗದೇ ನೋವಿನಲ್ಲೇ ಅಂಬಾರಿ ಹೊತ್ತಿದ್ದ, ಬಳಿಕ ದಸರೆ ಮುಗಿಸಿ ಕಾಡಿಗೆ ಹೋದಾಗ ಆತನ ಕಾಲಿಗೆ ಮೊಳೆ ಚುಚ್ಚಿರುವ ವಿಶೇಷ ತಿಳಿದು ವೈದ್ಯರಿಂದ ತಿಂಗಳ ಕಾಲ ಚಿಕಿತ್ಸೆ ನೀಡಲಾಗಿತ್ತು. ಅಂದಿನಿಂದ ದಸರಾ ತಾಲೀಮಿನ ವೇಳೆ ಆನೆ ಹೆಜ್ಜೆ ಹಾಕುವ ಮುಂದೆಯೇ ಇಬ್ಬರು ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ರಸ್ತೆಯ ಮೇಲಿನ ಕಬ್ಬಿಣದ ಚೂರು ಗಮನಿಸಲು ಬಿಟ್ಟಿರಲಾಗಿರುತ್ತದೆ. ಆದರೂ ಸಹ ಸಿಬ್ಬಂದಿಯ ಕಣ್ಣು ತಪ್ಪಿ ಮೊಳೆ ಚುಚ್ಚಿ ಆನೆಗಳಿಗೆ ಗಾಯಗಳಾಗಿರುವ ಕುರುಹುಗಳು ಸಹ ಇವೆ ಎನ್ನುತ್ತಾರೆ ಮಾವುತರೊಬ್ಬರು.
ಆನೆಗಳು ತಾಲೀಮು ನಡೆಸುವಾಗ ರಸ್ತೆಯಲ್ಲಿರುವ ಮೊಳೆಗಳು, ಚೂಪಾದ ಕಬ್ಬಿಣದ ಚೂರುಗಳು ಚುಚ್ಚಿದರೆ ಅಪಾಯವಾಗುತ್ತದೆ. ಆದ್ದರಿಂದ ಈ ಬಗ್ಗೆ ಎನ್ಜಿಒ ಸಂತೋಷ ಈ ಮಾಗ್ನೆಟಿಕ್ ಟ್ರ್ಯಾಲಿ ನೀಡಿದ್ದು, ಇದು ತುಂಬಾ ಪ್ರಯೋಜನಕಾರಿಯಾಗಿದೆ ಎನ್ನುತ್ತಾರೆ ವೈದ್ಯ ಡಾ.ನಾಗರಾಜು.