ಹುಣಸೂರು: ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಅರಣ್ಯದಿಂದ ನಾಡಿನತ್ತ ಕಾಡಾನೆಗಳು ಮುಖ ಮಾಡುತ್ತಿದ್ದು, ಕಾಡಂಚಿನ ಜನ ಭಯದಿಂದ ಜೀವನ ಮಾಡಬೇಕಾದ ದುಸ್ಥಿತಿ ಬಂದೊದಗಿದೆ.
ಆನೆಚೌಕೂರು ಮೀಸಲು ಅರಣ್ಯದಿಂದ ನೀರು ಆಹಾರ ಅರಸಿಕೊಂಡು ರೈತರ ಜಮೀನಿತ್ತ ಬರುತ್ತಿರುವ ಕಾಡಾನೆಗಳು ರೈತರು ಕಷ್ಟಪಟ್ಟು ಬೆಳೆಸಿದ ಬಾಳೆತೋಟ, ಕೃಷಿ ಫಸಲುಗಳನ್ನು ತಿಂದು, ತುಳಿದು ನಾಶ ಮಾಡುತ್ತಿದ್ದು, ಸಾಲ ಮಾಡಿ ಬೆಳೆದ ಬೆಳೆಗಳು ಕಾಡಾನೆಗಳ ಪಾಲಾಗುತ್ತಿದ್ದು, ಪರಿಣಾಮ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಹ ಸ್ಥಿತಿ ಒದಗಿ ಬಂದಿದೆ. ಈ ನಡುವೆ ಆನೆಚೌಕೂರು ಮೀಸಲು ಅರಣ್ಯದಿಂದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಾಟಿ ಹೊಸಕೆರೆಗೆ ನೀರು ಕುಡಿಯಲು ಹೊರಬಂದಿದ್ದ ಏಳು ಕಾಡಾನೆಗಳ ಹಿಂಡು ಅಲ್ಲಿಂದ ಕಿಕ್ಕೇರಿ ಕಟ್ಟೆ, ಹೆಬ್ಬಳ್ಳ ಮಾರ್ಗವಾಗಿ ಮುದ್ದನಹಳ್ಳಿ ಗ್ರಾಮಕ್ಕೆ ತೆರಳಿ ದಾಂಧಲೆ ಎಬ್ಬಿಸಿವೆ.
ಮುದ್ದನಹಳ್ಳಿ ಗ್ರಾಮದ ನಿವಾಸಿ ಮಹೇಂದ್ರ ಎಂಬುವರಿಗೆ ಸೇರಿದ ತೋಟಕ್ಕೆ ಶನಿವಾರ ರಾತ್ರಿ ನುಗ್ಗಿದ ಕಾಡಾನೆಗಳು ಅಡಿಕೆ ಸಸಿ, ಬಾಳೆ ಗಿಡಗಳನ್ನು ತಿಂದು-ತುಳಿದು ನಾಶ ಮಾಡಿವೆ. ಜೊತೆಗೆ ಜೋಳವನ್ನು ತುಳಿದು ಹಾಳು ಮಾಡಿದ್ದು, ತೋಟಕ್ಕೆ ಅಳವಡಿಸಿದ್ದ ಸ್ಪಿಂಕ್ಲರ್ ಸೆಟ್ ತುಳಿದು ನಾಶಪಡಿಸಿವೆ.
ಅಟ್ಟಣಿಗೆ ಮೇಲೆ ಕಾವಲು ಕಾಯುತ್ತಿದ್ದ ರೈತರಿಗೆ ಕಾಡಾನೆಗಳು ಬಂದಿರುವುದು ಗೊತ್ತಾಗಿದ್ದು, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಹಕಾರದಿಂದ ಪಟಾಕಿ ಸಿಡಿಸಿ, ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.